ಡೆಹ್ರಾಡೂನ್: ಕೇದಾರನಾಥದಲ್ಲಿ ಯಾತ್ರಿಕರ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿ 7 ಜನರು ಸಾವನ್ನಪ್ಪಿದ್ದ ದುರಂತ ಇಂದು ಬೆಳಿಗ್ಗೆ ಸಂಭವಿಸಿತ್ತು. ಈ ದುರಂತದ ಬೆನ್ನಲ್ಲೇ ಚಾರ್ ಧಾಮ್ ಯಾತ್ರೆಗೆ ಎರಡು ದಿನಗಳ ಕಾಲ ಹೆಲಿಕಾಪ್ಟರ್ ಸೇವೆ ಬಂದ್ ಮಾಡಲಾಗಿದೆ.
ಘಟನೆ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಧ್ಯ ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ರಾಜ್ಯ ಸರ್ಕಾರದ ಮೊದಲ ಆದ್ಯತೆ. ಹಾಗಾಗಿ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಹೆಲಿಕಾಪ್ಟರ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಸೇವೆ ಆರಂಭಿಸುವ ಮುನ್ನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಲು ವಿಮಾನಯಾನ ಕಂಪನಿಗಳು, ಡಿಜಿಸಿಎ, ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಕಟ್ಟುನಿಟ್ಟಾದ ಪ್ರಾಮಾಣಿತ ಕಾರ್ಯಾಚರಣೆ ವಿಧಾನ ಹೊರಡಿಸಲು ಸೂಚಿಸಲಾಗಿದೆ. ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೊಳ್ಳಬೇಕು ಹಾಗೂ ನಿಯಂತ್ರಣ ಮತ್ತು ಕಮಾಂಡರ್ ಸೆಂಟರ್ ಸ್ಥಾಪಿಸುವಂತೆ ಸೂಚಿಸಲಾಗಿದೆ ಎಂದರು.