ಬೆಂಗಳೂರು: ರಾಜ್ಯದಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆಯ ಆರ್ಭಟ ಸಾಲು ಸಾಲು ಅನಾಹುತಗಳನ್ನು ತಂದೊಡ್ಡಿದೆ. ಶತಮಾನಗಳ ಹಿಂದೆ ಅಪ್ಪಳಿಸಿದ್ದಂತಹ ಮಳೆ ಇದೀಗ ಕರ್ನಾಟಕಕ್ಕೆ ಅಪ್ಪಳಿಸಿದೆ ಎಂದು ಹೇಳಲಾಗುತ್ತಿದೆ. ಮೇ ತಿಂಗಳಲ್ಲಿಯೇ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದ್ದು, ಜಲಪ್ರಳಯದ ಭೀತಿ ಸೃಷ್ಟಿಸಿದೆ.
125 ವರ್ಷಗಳಲ್ಲಿಯೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಅತಿ ಹೆಚ್ಚು ಮಳೆ ಕರ್ನಾಟಕದಲ್ಲಿ ಆಗಿದ್ದು, ಬರೋಬ್ಬರಿ 67 ಜನರನ್ನು ಬಲಿ ಪಡೆದಿದೆ. ಕರಾವಳಿ ಜಿಲ್ಲೆಗಳು ವರುಣಾರ್ಭಟಕ್ಕೆ ಅಕಶರಶಃ ನಲುಗಿ ಹೋಗಿವೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಬದುಕು ಅಲ್ಲೋಲಕಲ್ಲೋವಾಗಿದೆ.
ಒಂದೆಡೆ ಭೂ ಕುಸಿತ, ಗುಡ್ಡ ಕುಸಿತ, ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಒಂದರ ಹಿಂದೊಂದರಂತೆ ಅನಾಹುತಗಳು ದಕ್ಷಿಣ ಕನ್ಣಡ ಜಿಲ್ಲೆಯಲ್ಲಿ ಸಂಭವಿಸುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಭಾರಿ ರಾಜ್ಯದಲ್ಲಿ ಮೇ ತಿಂಗಳಲ್ಲಿ ಸುರಿದಿರುವ ಮಳೆ ಶತಮಾನಗಳಷ್ಟು ಹಿಂದಿನ ಮಹಾಮಳೆ ಎಂದು ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. 125 ವರ್ಷಗಳಲ್ಲಿಯೇ ಮೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅಲ್ಲದೇ ಏಪ್ರಿಲ್ ನಿಂದ ಈವರೆಗೆ ರಾಜ್ಯದಲ್ಲಿ ಮಳೆ ಅನಾಹುತದಲ್ಲಿ 67 ಜನರು ಸಾವನ್ನಪ್ಪಿದ್ದಾರೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ ನಿಂದ ಮೇ ವರೆಗೆ ಪೂರ್ವ ಮುಂಗಾರು ಎಂದು ಹೇಳಲಾಗುತ್ತದೆ. ಆದರೆ ಈ ವರ್ಷ ಮುಂಗಾರು ಮಳೆ ರಾಜ್ಯಕ್ಕೆ ಸುಮಾರು ಹತ್ತು ದಿನ ಮುಂಚಿತವಾಗಿಯೇ ಎಂಟ್ರಿಕೊಟ್ಟಿದೆ. ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿಯೇ ಸಮಾನ್ಯಕ್ಕಿಂತ ಅತಿ ಹೆಚ್ಚು ಮಳೆಯಾಗಿದೆ.