ಬೆಂಗಳೂರು : ರಾಜ್ಯದಲ್ಲಿ ಕಮಲ್ ಹಾಸನ್ ವಿವಾದಕ್ಕೆ ಸಂಬಂಧಿಸಿದಂತೆ ಥಗ್ ಲೈಫ್ ಸಿನಿಮಾ ಬ್ಯಾನ್ ಮಾಡುವ ಕುರಿತು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ ಚಿತ್ರವನ್ನು ನಿಷೇಧ ಮಾಡಲು ಕಾನೂನಾತ್ಮವಾಗಿ ಅವಕಾಶ ಇಲ್ಲದೇ ಇದ್ದರಿಂದ ಫಿಲ್ಮ್ ಚೇಂಬರ್ ಸರ್ಕಾರದ ಮೊರೆ ಹೋಗಿದ್ದು, ಇಂದು ಸಿಎಂ ಅವರನ್ನು ಭೇಟಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದೆ.ಕ್ಷಮೆ ಕೇಳಲು ಫಿಲ್ಮ್ ಚೇಂಬರ್ ನಟ ಕಮಲ್ ಹಾಸನ್ ಗೆ 24 ಗಂಟೆ ಗಡುವು ನೀಡಿದೆ ಎಂಬ ಮಾಹಿತಿ ಲಭ್ಯ ವಾಗಿದೆ.ಕಮಲ್ ಹಾಸನ್ ಕನ್ನಡಿಗರಿಗೆ ನೋವುಂಟು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲ್ಲ. ಅವರು ಕ್ಷಮೆ ಕೇಳಲೇಬೇಕು. ಇಲ್ಲವಾದಲ್ಲಿ ಅವರ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಮಲ್ ಹಾಸನ್ ದುಬೈನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ, ಅವರಿಗೆ 24 ಗಂಟೆ ಕಾಲಾವಕಾಶ ಕೊಡಲಾಗಿದೆ. ಅವರು ಕ್ಷಮೆ ಕೇಳಲು ಕಾಲಾವಕಾಶ ನೀಡುವಂತೆ ವಿತರಕರು ಮನವಿ ಮಾಡಿದ್ದಾರೆ. ಆದ್ದರಿಂದ ಅವರಿಗೆ 24 ಗಂಟೆ ಕಾಲಾವಕಾಶ ಕೊಡಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದರು.