ಜಾರ್ಖಂಡ್ ಬಾಲಕನೊಬ್ಬ ಗೆಳತಿಯನ್ನು ಕೊಂದು, ಕೊಲೆಯ ವೀಡಿಯೊವನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲೋಹರ್ದಗಾ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ತನ್ನ ಹದಿಹರೆಯದ ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಬಾಲಕನ ಶವವನ್ನು ವಶಪಡಿಸಿಕೊಂಡಿದ್ದಾರೆ. ಹುಡುಗ 14 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಕೊಂದಿದ್ದಾನೆ. ಈ ಘಟನೆ ಸೆರೆಂಗ್ಡಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹುಡುಗ ಈ ಭಯಾನಕ ಕೃತ್ಯವನ್ನು ರೆಕಾರ್ಡ್ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ನಂತರ ಹತ್ತಿರದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೇಟಿಂಗ್ ಮಾಡುತ್ತಿದ್ದ ಇಬ್ಬರು ಹದಿಹರೆಯದವರು ದಂಡು ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಸ್ನೇಹಿತರೊಂದಿಗೆ ಭಾಗವಹಿಸಿದ್ದರು. ಸಂಜೆ ಹಿಂತಿರುಗುವಾಗ ಗಲಾಟೆಯಾಗಿ ಜಯನಾಥ್ ಹುಡುಗಿಯನ್ನು ಹಲವು ಬಾರಿ ಇರಿದು ಕೊಂದಿದದಾನೆ.
ಗೆಳತಿ ಇತ್ತೀಚೆಗೆ ಜಯನಾಥ್ ನಿಂದ ದೂರವಾಗಿದ್ದಳು. ಇದು ಅವನ ಕೋಪಕ್ಕೆ ಕಾರಣವಾಗಿರಬಹುದು ಎಂದು ಲೋಹರ್ದಗಾ ಎಸ್ಪಿ ಸಾದಿಕ್ ಅನ್ವರ್ ರಿಜ್ವಿ ಹೇಳಿದ್ದಾರೆ.
ಜಯನಾಥ್ ಕೊಲೆ ದೃಶ್ಯಗಳನ್ನು ಚಿತ್ರೀಕರಿಸಿ ಹುಡುಗಿಯ ದೇಹ ಮತ್ತು ರಕ್ತಸಿಕ್ತ ಚಾಕುವಿನೊಂದಿಗೆ ಸೆಲ್ಫಿ ತೆಗೆದುಕೊಂಡು ದೃಶ್ಯಗಳನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಗ್ರಾಮಸ್ಥರು ಅವನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅವನು ತಪ್ಪಿಸಿಕೊಂಡು ಕಾಡಿಗೆ ಓಡಿಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದುಂಡೂರು ಶಾಲೆಯ ವಿದ್ಯಾರ್ಥಿನಿಯಾಗಿರುವ ತನ್ನ ಮಗಳು ಜಯನಾಥ್ ಸೇರಿದಂತೆ ಸ್ನೇಹಿತರೊಂದಿಗೆ ಜಾತ್ರೆಗೆ ಹೋಗಿದ್ದಳು ಎಂದು ಬಲಿಪಶುವಿನ ತಂದೆ ರಾಮದಯಾಳ್ ಖೇರ್ವಾರ್ ಹೇಳಿದ್ದಾರೆ.
ದಾಳಿಯ ಸಮಯದಲ್ಲಿ ಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಎರಡೂ ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಕೈಗೊಂಡಿದ್ದಾರೆ.