ಚೆನ್ನೈನಲ್ಲಿ ನಡೆದ ತಮ್ಮ ಇತ್ತೀಚಿನ ಚಿತ್ರ ಥಗ್ ಲೈಫ್ನ ಪ್ರಚಾರ ಕಾರ್ಯಕ್ರಮದಲ್ಲಿ “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂದು ಹೇಳಿ ಕಮಲ್ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೀಗ ನಟ-ರಾಜಕಾರಣಿ ಕಮಲ್ ಹಾಸನ್ ಮತ್ತೆ ಉದ್ಠಟನ ಮೆರೆದಿದ್ದಾರೆ. ತಾನು ತಪ್ಪಾಗಿ ಹೇಳಿಲ್ಲ, ಬೆದರಿಕೆಗಳಿಗೆ ಹೆದರಲ್ಲ, ಕ್ಷಮೆಯಾಚಿಸುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ ಮತ್ತು ತಮಗೆ ಈ ಹಿಂದೆಯೂ ಬೆದರಿಕೆಗಳು ಬಂದಿದೆ ಎಂದು ಹೇಳಿದ್ದಾರೆ.
“ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ಕಾರ್ಯಸೂಚಿ ಹೊಂದಿರುವವರನ್ನು ಹೊರತುಪಡಿಸಿ ಯಾರೂ ಇದನ್ನು ಅನುಮಾನಿಸುವುದಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿದೆ, ನನ್ನದು ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ, ತಪ್ಪು ಮಾಡದಿದ್ರೆ ನಾನು ಕ್ಷಮೆ ಕೇಳಲ್ಲ…” ಎಂದು ಹೇಳಿದರು. ಕನ್ನಡ ಭಾಷೆಯ ಬಗ್ಗೆ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದರು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ ನಂತರ ಅವರು ಮತ್ತು ಅವರ “ಥಗ್ ಲೈಫ್” ಚಿತ್ರ ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಕರ್ನಾಟಕದ ಬೆಳಗಾವಿಯಲ್ಲಿರುವ ಐನಾಕ್ಸ್ ಸಿನಿಮಾ ಮಂದಿರದ ಹೊರಗೆ ಕರ್ನಾಟಕ ರಕ್ಷಣಾ ವೇದಿಕೆ ಗುಂಪು ಆಯೋಜಿಸಿದ್ದ ಪ್ರತಿಭಟನೆಗಳು ನಡೆದವು.