ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಸಮಗ್ರ ಸಮೀಕ್ಷೆಯ ವಿಶೇಷ ಶಿಬಿರಗಳ ಅವಧಿಯನ್ನು ಜೂನ್ 6ರವರೆಗೆ ವಿಸ್ತರಿಸಲಾಗಿದೆ.
ಆನ್ಲೈನ್ ನೋಂದಣಿ ಅವಧಿಯನ್ನು ಜೂನ್ 8ರವರೆಗೆ ವಿಸ್ತರಿಸಲಾಗಿದೆ. ಸಮಗ್ರ ಸಮೀಕ್ಷೆ ಭಾಗವಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಹಂತ ಈಗಾಗಲೇ ಮುಕ್ತಾಯವಾಗಿದೆ. ಈ ಹಂತದಲ್ಲಿ ಮಾಹಿತಿ ನೀಡದೆ ಇದ್ದವರು, ಮಾಹಿತಿ ತಪ್ಪಾದವರು ವಿಶೇಷ ಶಿಬಿರಗಳಿಗೆ ತೆರಳಿ ಅಥವಾ ಆನ್ಲೈನ್ ಮೂಲಕ ನೋಂದಣಿ ಮಾಡಿಸಲು ಅವಕಾಶ ನೀಡಲಾಗಿದೆ.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅಧ್ಯಕ್ಷತೆಯ ಏಕಸದಸ್ಯ ವಿಚಾರಣಾ ಆಯೋಗದಿಂದ ಈ ಬಗ್ಗೆ ಪ್ರಕಟಣೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಮೀಕ್ಷೆ ಪ್ರಗತಿ ಸಾಧ್ಯವಾಗಿಲ್ಲ. ಇದರೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಸಾಧ್ಯವಾಗಿಲ್ಲ. ಮನವಿಗಳನ್ನು ಪರಿಶೀಲಿಸಿ ವಿಶೇಷ ಶಿಬಿರಗಳು ಮತ್ತು ಆನ್ಲೈನ್ ನೋಂದಣಿ ಅವಧಿಯನ್ನು ಮಾತ್ರ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.