ಅಜೆರ್ಬೈಜಾನ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ.
ಎರಡೂ ಕಡೆಯವರು ಒಟ್ಟಿಗೆ ಕುಳಿತು ಕಾಶ್ಮೀರ, ನೀರು ಮತ್ತು ಭಯೋತ್ಪಾದನೆ ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.
ಅಜೆರ್ಬೈಜಾನ್ನ ಲಾಚಿನ್ನಲ್ಲಿ ಅಧ್ಯಕ್ಷರಾದ ರೆಸೆಪ್ ತಯ್ಯಿಪ್ ಎರ್ಡೋಗನ್ ಮತ್ತು ಇಲ್ಹಾಮ್ ಅಲಿಯೆವ್ ಭಾಗವಹಿಸಿದ್ದ ಪಾಕಿಸ್ತಾನ-ತುರ್ಕಿ-ಅಜೆರ್ಬೈಜಾನ್ ತ್ರಿಪಕ್ಷೀಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಷರೀಫ್ ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಒತ್ತಾಯಿಸಲು ಈ ವಾರ ಅವರು ನೀಡಿದ ಎರಡನೇ ಹೇಳಿಕೆ ಇದು. ಟೆಹ್ರಾನ್ನಲ್ಲಿ, ಷರೀಫ್ ಸೋಮವಾರ “ಎಲ್ಲಾ ವಿವಾದಗಳನ್ನು ಪರಿಹರಿಸಲು” ಭಾರತದೊಂದಿಗೆ ಮಾತನಾಡಲು ಸಿದ್ಧ ಎಂದು ಹೇಳಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವುದು ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಸ್ಪಷ್ಟಪಡಿಸಿದೆ.
ನಾವು ಒಟ್ಟಿಗೆ ಕುಳಿತು ಶಾಂತಿಗಾಗಿ ಮಾತನಾಡಬೇಕು. ತಕ್ಷಣದ ಗಮನವನ್ನು ಬಯಸುವ ಸಮಸ್ಯೆಗಳಿವೆ ಮತ್ತು ಸಂವಾದದ ಮೂಲಕ ಪರಿಹರಿಸಬೇಕು ಎಂದು ಲಾಚಿನ್ನಲ್ಲಿ ನಡೆದ ತ್ರಿಪಕ್ಷೀಯ ಶೃಂಗಸಭೆಯಲ್ಲಿ ಷರೀಫ್ ಹೇಳಿದ್ದನ್ನು ಡಾನ್ ಪತ್ರಿಕೆ ಉಲ್ಲೇಖಿಸಿದೆ.