ಶಿಲ್ಲಾಂಗ್/ಇಂದೋರ್: ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಅವರ ಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೆಚ್ಚು ಆಘಾತಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹನಿಮೂನ್ಗೆ ತೆರಳಿದ್ದಾಗ ತನ್ನ ಪತಿಯ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಸೋನಮ್ ರಘುವಂಶಿ ಬಂಧಿತರಾದ ನಂತರ, ಮದುವೆಗೂ ಮುನ್ನವೇ ತನಗೆ ರಾಜಾ ರಘುವಂಶಿಯನ್ನು ಮದುವೆಯಾಗಲು ಬಲವಂತ ಮಾಡಿದರೆ “ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ.
ಎನ್ಡಿಟಿವಿ ವರದಿ ಮಾಡಿದಂತೆ, ರಾಜಾ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ಮದುವೆಗೂ ಮುನ್ನವೇ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆಗಿನ ಸಂಬಂಧದ ಬಗ್ಗೆ ತಾಯಿಗೆ ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಆದರೆ, ಸೋನಮ್ ಕುಟುಂಬವು ತಮ್ಮ ಕುಟುಂಬದ ವ್ಯವಹಾರದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಕುಶ್ವಾಹನನ್ನು ಒಪ್ಪಿಕೊಂಡಿರಲಿಲ್ಲ.
ಮದುವೆಗೂ ಮುನ್ನವೇ ಸೋನಮ್ ಎಚ್ಚರಿಕೆ
“ಸೋನಮ್ ಈಗಾಗಲೇ ತನ್ನ ಪ್ರಿಯಕರ ರಾಜ್ ಜೊತೆಗಿನ ಸಂಬಂಧದ ಬಗ್ಗೆ ತಾಯಿಗೆ ತಿಳಿಸಿದ್ದರು ಎಂದು ವಿಪಿನ್ ಹೇಳಿದ್ದಾರೆ. ಅವರು ರಾಜಾ ಅವರನ್ನು ಮದುವೆಯಾಗಲು ಬಯಸಲಿಲ್ಲ ಎಂದಿದ್ದರು. ಆದರೆ, ಅವರ ತಾಯಿ ರಾಜ್ ಜೊತೆಗಿನ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು” ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ವರದಿಯ ಪ್ರಕಾರ, ಸೋನಮ್ ಅನಿವಾರ್ಯವಾಗಿ ರಾಜಾ ಅವರನ್ನು ಮದುವೆಯಾಗಲು ಒಪ್ಪಿಕೊಂಡರೂ, ಕುಟುಂಬಕ್ಕೆ ತೀವ್ರ ಎಚ್ಚರಿಕೆ ನೀಡಿದ್ದರು. “ರಾಜಾ ಅವರನ್ನು ಮದುವೆಯಾಗಲು ಸೋನಮ್ ಒಪ್ಪಿಕೊಂಡರು, ಆದರೆ ‘ಆ ವ್ಯಕ್ತಿಗೆ ನಾನು ಏನೂ ಮಾಡ್ತೀನಿ ನೋಡ್ತೀರಿ. ನೀವೆಲ್ಲರೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಯಾರೂ ಕೂಡ ಅವರು ರಾಜಾ ಅವರನ್ನು ಕೊಲ್ಲುತ್ತಾರೆ ಎಂದು ಊಹಿಸಿರಲಿಲ್ಲ” ಎಂದು ಮೂಲಗಳು ಹೇಳಿವೆ.
ಇಂದೋರ್ ನಿವಾಸಿಗಳಾದ 29 ವರ್ಷದ ಸಾರಿಗೆ ಉದ್ಯಮಿ ರಾಜಾ ಮತ್ತು ಸೋನಮ್ ಮೇ 11ರಂದು ವಿವಾಹವಾಗಿದ್ದರು. ಕೆಲವೇ ದಿನಗಳ ನಂತರ, ಮೇಘಾಲಯದಲ್ಲಿ ಹನಿಮೂನ್ನಲ್ಲಿದ್ದಾಗ, ರಾಜಾ ಅವರನ್ನು ರಾಜ್ ಮತ್ತು ಮೂವರು ಪುರುಷರ ಸಹಾಯದಿಂದ ಸೋನಮ್ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು hindustan Times ಗೆ ತಿಳಿಸಿದಂತೆ, “ರಾಜ್ ಕುಶ್ವಾಹ, ತಾನು ಸೋನಮ್ಗೆ ಬೆಂಬಲ ನೀಡಲು ಬಯಸಲಿಲ್ಲ ಮತ್ತು ಕೊನೆಯ ಕ್ಷಣದಲ್ಲಿ ಮೇಘಾಲಯಕ್ಕೆ ಹೋಗುವ ಯೋಜನೆಯನ್ನು ರದ್ದುಗೊಳಿಸಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಉಳಿದ ಮೂವರು ಹೋಗಬಾರದು ಎಂದು ಹೇಳಿದ್ದರೂ, ಸೋನಮ್ ಟಿಕೆಟ್ ಬುಕ್ ಮಾಡಿದ ನಂತರ ಅವರು ಮೇಘಾಲಯವನ್ನು ನೋಡಲು ಹೋಗಿದ್ದಾರೆ” ಎಂದಿದ್ದಾರೆ. “ಕೊನೆಯ ಕ್ಷಣದಲ್ಲಿ ಸಹ ಮೂವರು ಕೊಲೆ ಮಾಡಲು ನಿರಾಕರಿಸಿದರು, ಆದರೆ ಸೋನಮ್ ಒತ್ತಾಯಿಸಿ, ಅದಕ್ಕಾಗಿ ₹15 ಲಕ್ಷ ನೀಡುವುದಾಗಿ ಹೇಳಿದ್ದಾಳೆ. ಪೊಲೀಸರು ಈ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ” ಎಂದು ಆ ಅಧಿಕಾರಿ ಸೇರಿಸಿದ್ದಾರೆ.
ಮೇ 23 ರಂದು ನಾಂಗ್ರಿಯಾಟ್ ಗ್ರಾಮದ ಹೋಮ್ಸ್ಟೇನಿಂದ ಚೆಕ್ ಔಟ್ ಆದ ನಂತರ ದಂಪತಿ ಪತ್ತೆಯಾಗದಿದ್ದಾಗ, ಆರಂಭದಲ್ಲಿ ಇದು ಚಾರಣದ ವೇಳೆ ದಾರಿ ತಪ್ಪಿದ ಪ್ರಕರಣ ಎಂದು ತೋರಿತ್ತು. ಆದರೆ, ಜೂನ್ 2 ರಂದು ಹೋಮ್ಸ್ಟೇನಿಂದ ಸುಮಾರು 20 ಕಿ.ಮೀ ದೂರದಲ್ಲಿ ರಾಜಾ ಅವರ ದೇಹ ಪತ್ತೆಯಾದ ನಂತರ, ಇದು ಆಘಾತಕಾರಿ ಕೊಲೆ ಪಿತೂರಿ ಎಂಬುದು ಬಹಿರಂಗವಾಯಿತು. ಸೋನಮ್, ರಾಜ್ ಮತ್ತು ಮೂವರು ಬಾಡಿಗೆ ಹಂತಕರನ್ನು ಒಳಗೊಂಡ ಪಿತೂರಿಯ ಭಾಗವಾಗಿ ರಾಜಾ ಅವರನ್ನು ಕೊಲ್ಲಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಸೋನಮ್ ನಾಪತ್ತೆಯಾಗಿದ್ದು, ರಾಜ್ ಜೊತೆ ಹೋಟೆಲ್ ರೂಮಿನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ನಂತರ ಅವರನ್ನು ಇಂದೋರ್ಗೆ ಕಳುಹಿಸಲಾಗಿತ್ತು, ಅಲ್ಲಿ ಅವರು ಎರಡು ದಿನಗಳ ಕಾಲ ತಂಗಿದ್ದರು.
ಮಂಗಳವಾರ ಉತ್ತರ ಪ್ರದೇಶದ ಗಾಜಿಪುರ ಪೊಲೀಸ್ ಠಾಣೆಗೆ ಶರಣಾದ ನಂತರ ಸೋನಮ್ ಅವರನ್ನು ಬಂಧಿಸಲಾಯಿತು. ಅದೇ ರಾತ್ರಿ ಅವರನ್ನು ಶಿಲ್ಲಾಂಗ್ಗೆ ಕರೆತರಲಾಯಿತು. ರಾಜ್ ಕುಶ್ವಾಹ ಮತ್ತು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮೂವರು ಇತರ ಆರೋಪಿಗಳನ್ನು ಬಂಧಿಸಿದ ನಂತರ ಸೋನಮ್ ಬಂಧನ ನಡೆಯಿತು.