ಕನ್ನಡ ರಾಜ್ಯೋತ್ಸವದಲ್ಲಿ `ಸಿಎಂ ಸಿದ್ದರಾಮಯ್ಯ’ ಭಾಷಣದ ಮುಖ್ಯಾಂಶಗಳು

ಬೆಂಗಳೂರು : ರಾಜ್ಯಾದ್ಯಂತ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಕನ್ನಡದ ಭಾವುಟಗಳು ರಾರಾಜಿಸುತ್ತಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು.

ಧ್ವಜರೋಹಣದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನವೆಂಬರ್ 1 2023 ರಿಂದ 2024 ನವೆಂಬರ್ 1 ರವರೆಗೆ ಕನ್ನಡ ಸಂಭ್ರಮ ವರ್ಷವನ್ನು ಆಚರಣೆ ಮಾಡುವಂತೆ ಘೋಷಣೆ ಮಾಡಲಾಗಿದ್ದು, ಮುಂದಿನ 1 ವರ್ಷದವರೆಗೆ ಕನ್ನಡ ಸಂಭ್ರಮವನ್ನು ಆಚರಿಸುತ್ತೇವೆ. ಇಡೀ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ  ಎಂದರು.

ನಮ್ಮ ಭಾಷೆ, ನೆಲ, ಜಲ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಕೂಡ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡನಾಡು ತಾಯಿನಾಡು, ಕನ್ನಡ ಭಾಷೆ ನನ್ನ ತಾಯಿ ಭಾಷೆ. ಈ ನಾಡಿನ ಋಣ ತೀರಿಸಬೇಕಾದ್ರೆ ಕನ್ನಡ ನೆಲ, ಜಲ ಭಾಷೆ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಮಾತನಾಡಬೇಕು. ಬೇರೆ ರಾಜ್ಯಗಳಲ್ಲಿ ಅಧಿಕೃತ ಭಾಷೆಯನ್ನೇ ಹೆಚ್ಚು ಬಳಕೆ ಮಾಡ್ತಾರೆ. ಅದೇ ರೀತಿ ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಭಾಷೆ ಮಾತನಾಡದೇ ಕರ್ನಾಟಕದಲ್ಲಿ ಇರುವವರಿದ್ದಾರೆ. ಆದರೆ ಅವರೂ ಸಹ ಕನ್ನಡ ಭಾಷೆಯನ್ನು ಮಾತನಾಡಬೇಕು. ಕನ್ನಡ ಭಾಷೆ ನಮ್ಮ ಸಾರ್ವಭೌಮ ಭಾಷೆ ಎಂದು ತಿಳಿಸಿದ್ದಾರೆ.

ಸರ್ಕಾರದಲ್ಲಿ ನಡೆಯುವ ಅಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಕೇಂದ್ರ ಸರ್ಕಾರಕ್ಕೆ ವ್ಯವಹಿಸುವಾಗ ಮಾತ್ರ ಇಂಗ್ಲಿಷ್ ಭಾಷೆ ಬಳಸಬೇಕು. ಅಡಳಿತ ಮಾಡುವಾಗ ಕನ್ನಡದಲ್ಲೇ ವ್ಯವಹರಿಸಬೇಕು. ನಮ್ಮ ಮಕ್ಕಳಿಗೆ ಯಾವ ಭಾಷೆ ಗೊತ್ತಿರುತ್ತದೆಯೋ ಅದೇ ಭಾಷೆಯಲ್ಲಿ ಕನ್ನಡ ಪರೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಬಡಜನತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅನ್ನಭಾಗ್ಯ, ಗೃಹಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಶಕ್ತಿ ಯೋಜನೆ ಮೂಲಕ 86 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ 1.28 ಕೋಟಿ ಕುಟುಂಬಗಳಿಗೆ 5 ಕೆಜಿ ಅಕ್ಕಿ ಬದಲು ತಲಾ 170 ರೂ.ಗಳನ್ನು ಕೊಟ್ಟಿದ್ದೇವೆ. ಗೃಹಜ್ಯೋತಿ ಕಾರ್ಯಕ್ರಮದಲ್ಲಿ ಸುಮಾರು 1.38 ಕೋಟಿ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಿದ್ದೇವೆ. ಮನೆಯ ಯಜಮಾನಿಗೆ 2,000 ರೂ.ಇಲ್ಲಿವರೆಗೆ 1.07 ಕೋಟಿ ರೂ. ನೀಡಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸರ್ಕಾರವು ಕನ್ನಡಿಗರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದ್ದೇವೆ. ಕರ್ನಾಟಕವನ್ನು ಇನ್ನೂ ಸದೃಢವಾಗಿ ನಿರ್ಮಾಣ ಮಾಡುವ ಕೆಲಸ ಮಾಡೋಣ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read