ಬೆಂಗಳೂರು: ವೈಯಕ್ತಿಕ ದಾಖಲೆಗಳಿಲ್ಲದ ಕಾರಣಕ್ಕೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ‘ನನ್ನ ಗುರುತು’ ಅಭಿಯಾನ ಆಸರೆಯಾಗುತ್ತಿದೆ.
ಅಧಿಕಾರಿಗಳು ಇಂತಹ ಕುಟುಂಬಗಳ ಮನೆಗೆ ತೆರಳಿ ಅವರಿಗೆ 13 ಸೇವೆಗಳನ್ನು ಒದಗಿಸುತ್ತಿದ್ದಾರೆ. ದಾಖಲೆ ಕಳೆದು ಹೋದವರು, ಹಳೆಯ ದಾಖಲೆಗಳ ತಿದ್ದುಪಡಿ ಬಯಸಿರುವ ಅಸಹಾಯಕ ಕುಟುಂಬಗಳಿಗೆ ಈ ಅಭಿಯಾನ ನೆರವಾಗುತ್ತಿದೆ.
ಬೆಂಗಳೂರು ನಗರ ಉತ್ತರ ತಾಲೂಕಿನ ಹುಸ್ಕೂರು, ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯತಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ‘ನನ್ನ ಗುರುತು’ ಅಭಿಯಾನ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈಗಾಗಲೇ 30 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ವಿತರಿಸಲಾಗಿದೆ.
ಶೀಘ್ರದಲ್ಲಿಯೇ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ವಿಸ್ತರಿಸುವ ಮೂಲಕ ಸೌಲಭ್ಯ ವಂಚಿತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನವನ್ನು ಚುರುಕುಗೊಳಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿಯೂ ಈ ಅಭಿಯಾನ ನಡೆಯಲಿದ್ದು, ಪರಿಶಿಷ್ಟರಿಗೆ ಅರ್ಹ ಸರ್ಕಾರಿ ಯೋಜನೆಗಳು ಮತ್ತು ಸವಲತ್ತುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.