ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಬಡಾವಣೆಯ ನಿವೇಶನದಾರರು ಮನೆ ಅಥವಾ ಕಟ್ಟಡ ನಿರ್ಮಿಸಿಕೊಂಡವರಿಗೆ ಜುಲೈ 2ನೇ ವಾರದ ನಂತರ ಬಿ ಖಾತೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ಬಿ ಖಾತೆ ನೀಡದಿದ್ದರೆ ಇ- ಸ್ವತ್ತು ವಿತರಣೆಯಾಗುವುದಿಲ್ಲ. ಹೀಗಾಗಿ ಅನಧಿಕೃತ ಬಡಾವಣೆಯ ನಿವೇಶನಗಳ ಕ್ರಯ ವಿಕ್ರಯ ಪ್ರಕ್ರಿಯೆ ಪೂರ್ಣಾ ಪ್ರಮಾಣದಲ್ಲಿ ನಿಂತು ಹೋಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ 2025 ರನ್ನು ಶಾಸನಸಭೆ ಅನುಮೋದಿಸಿದ್ದು, ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಕಾಯ್ದೆಯ ಪ್ರಕಾರ ನಗರ, ಪಟ್ಟಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಜಾರಿಗೆ ಬಂದಿರುವ ಅನಧಿಕೃತ ಆಸ್ತಿಗಳಿಗೆ ಬಿ -ಖಾತಾ ಸ್ವರೂಪದ ಇ- ಖಾತಾ ನೀಡುವ ವ್ಯವಸ್ಥೆಯನ್ನು ಹಳ್ಳಿಗಳಿಗೂ ವಿಸ್ತರಿಸಲಾಗುವುದು.
ಗ್ರಾಮೀಣ ಪ್ರದೇಶದಲ್ಲಿರುವ ಅನಧಿಕೃತ ಕಟ್ಟಡ, ನಿವೇಶನ ಬಡಾವಣೆಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಅದರ ಮಾಲೀಕರಿಗೆ ನೆಮ್ಮದಿ ನೀಡುವ ಉದ್ದೇಶದಿಂದ ಕಾಯ್ದೆ ತರಲಾಗಿದೆ. ಸರ್ಕಾರ ಬಿ -ಖಾತಾ ವಿತರಿಸಿದ ಕೂಡಲೇ ಅನಧಿಕೃತ ಕಟ್ಟಡ ನಿವೇಶನಗಳಿಗೆ ಅಧಿಕೃತ ಮಾನ್ಯತೆ ಬರುವುದಿಲ್ಲ. ಹಕ್ಕು ಸ್ವಾಮ್ಯ ಸಾಧಿಸಲು ಆಗುವುದಿಲ್ಲ. ಇದು ತಾತ್ಕಾಲಿಕ ಪರಿಹಾರವಷ್ಟೇ ಆಗಿರಲಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ಗ್ರಾಮೀಣ ಸಂಸ್ಥೆಗಳಿಗೆ ತೆರಿಗೆ ರೂಪದಲ್ಲಿ ಆರ್ಥಿಕ ಬಲವರ್ಧನೆ ಸಾಧ್ಯವಾಗಲಿದೆ. ಅಗತ್ಯ ಸೌಲಭ್ಯ ನೀಡುತ್ತಿದ್ದರೂ ಗ್ರಾಮೀಣ ಸಂಸ್ಥೆಗಳು ಆದಾಯ ವಂಚಿತವಾಗಿದ್ದವು, ಈಗ ಬಿ-ಖಾತಾ ನೀಡುವುದರಿಂದ ಅಂತಹ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಮೊದಲ ವರ್ಷದಲ್ಲಿ ಎರಡು ಪಟ್ಟು ತೆರಿಗೆ ಪಾವತಿಸಬೇಕು. ನಂತರದ ವರ್ಷಗಳಿಗೆ ವಾರ್ಷಿಕ ಆಸ್ತಿ ತೆರಿಗೆ ಮಾತ್ರ ವಿಧಿಸಲಾಗುವುದು. ಬಿ -ಖಾತಾ ನೀಡಿದ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್ ನಲ್ಲಿ ನಮೂದಿಸಲಾಗುವುದು.