ರೈತರಿಗೆ ಗುಡ್ ನ್ಯೂಸ್: ಕೃಷಿ, ತೋಟಗಾರಿಕೆ ಬೆಳೆ ಹಾನಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ: ಸಚಿವ ಸಂತೋಷ ಲಾಡ್

ಧಾರವಾಡ: ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕು ಸೇರಿದಂತೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಅಂದಾಜು 55 ಸಾವಿರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು ರೈತರಿಗೆ ಬೆಳೆಹಾನಿ ಮಂಜೂರಾತಿಗಾಗಿ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಲು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧಿಕಾರಿಕಾರಿಗಳಿಗೆ ಸೂಚಿಸಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಮಾತನಾಡಿದರು.

ಅವರು ನರಗುಂದ-ಗದಗ ರಾಜ್ಯ ಹೆದ್ದಾರಿಯ ನವಲಗುಂದ ತಾಲ್ಲೂಕಿನ ತಡಹಾಳ ಹತ್ತಿರ ಇರುವ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ ಸೇತುವೆ ಕೊಚ್ಚಿಹೋದದ್ದನ್ನು ವೀಕ್ಷಿಸಿದ ಕೂಡಲೇ ವಿಶೇಷ ತಜ್ಞರ ಜೊತೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ನೂತನ ಸೇತುವೆ ನಿರ್ಮಿಸಲು ಈಗಾಗಲೇ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆ ಚರ್ಚಿಸಿದ್ದು ತಕ್ಷಣ ವರದಿ ನೀಡಿ ಸರ್ಕಾರದಿಂದ ಮಂಜೂರಾತಿ ಪಡೆಯಬೇಕು ಎಂದು ಹೇಳಿದರು. ತಜ್ಞರ ಅಭಿಪ್ರಾಯದ ನಂತರ ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಅವರು ಸೂಚಿಸಿದರು.

ನವಲಗುಂದ ನಗರದ ಹುಗ್ಗಿ  ಓಣಿಯ ಮನೆ ಬಿದ್ದ ತರುವಾಯ ದ್ಯಾಮವ್ವ ಬನ್ನೆಣ್ಣವರ, ಹಾಗೂ ಕಳ್ಳಿಮಠ ಮೆಹಬೂಬ ನಗರದ ಮೋದಿನಸಾಬ ಶಿರಕೋಳ ಅವರುಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ತಿಳಿಸಿದರು. ಶಲವಡಿ ನಾಯಕನೂರ ಗ್ರಾಮದ ನಡುವೆ ಜಮೀನಿನಲ್ಲಿ ಹೆಸರು ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿದರು. 

ಅಣ್ಣಿಗೇರಿ ತಾಲ್ಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ಕುಸಿದು ಹಾನಿಯಾದ ಮನೆಗೆ ಭೇಟಿ ನೀಡಿ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮನೆ ಕುಸಿತದಲ್ಲಿ ಸಿಲುಕಿದ 4 ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ತಿಳಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಹತ್ತಿರ ಶಿರಗುಪ್ಪಿ ಗ್ರಾಮದ ನಿಂಗವ್ವ ತೊಗರಿಮನಿ ಅವರ ಹೊಲದಲ್ಲಿ ಹೆಸರು ಬೆಳೆ ಹಾನಿಯಾಗಿದ್ದನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ತಕ್ಷಣ ವರದಿ ಮಾಡಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ, ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ  ದಿವ್ಯ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಐಎಎಸ್ ಅಧಿಕಾರಿ  ರಿತಿಕಾ ಶರ್ಮಾ, ಉಪವಿಭಾಗಾಧಿಕಾರಿ ಶಲಾಂ ಹುಸೇನ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಇತರರು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read