ಬೆಂಗಳೂರು : ರಾಜ್ಯದ ಕಟ್ಟಡ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಶೇ.15 ರಷ್ಟು ಉಲ್ಲಂಘನೆಯಾಗಿದ್ರೆ ಸಕ್ರಮಗೊಳಿಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಹೌದು, ರಾಜ್ಯದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ಪರಿಹಾರ ಮಾರ್ಗವನ್ನು ನೀಡಿದೆ. ಅನುಮೋದಿತ ಕಟ್ಟಡ ನಕ್ಷೆಗಿಂತ ಸಣ್ಣ ಪ್ರಮಾಣದಲ್ಲಿ ಹೆಚ್ಚುವರಿ ನಿರ್ಮಾಣಗಳನ್ನು ಮಾಡಿಕೊಂಡಿದ್ದ ಸಾವಿರಾರು ಕಟ್ಟಡ ಮಾಲೀಕರಿಗೆ ಹೊಸ ತಿದ್ದುಪಡಿ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಹೊಸ ನಿಯಮವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯನ್ನು ಹೊರತುಪಡಿಸಿ, ರಾಜ್ಯದ ಇತರೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗಲಿದೆ. ‘ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಮಾಡೆಲ್ ಬಿಲ್ಡಿಂಗ್ (ತಿದ್ದುಪಡಿ) ಬೈ-ಲಾ 2025’ ಅನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಕಟ್ಟಡದ ಅನುಮೋದಿತ ನಕ್ಷೆಗಿಂತ ಶೇ. 15ರಷ್ಟು ಹೆಚ್ಚುವರಿ ನಿರ್ಮಾಣವಾಗಿದ್ದರೆ, ಅದನ್ನು ಹೊಸ ಬೈ-ಲಾದ ಅಡಿಯಲ್ಲಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೌಲಭ್ಯವು ಎಲ್ಲಾ ರೀತಿಯ ಉಲ್ಲಂಘನೆಗಳಿಗೂ ಅನ್ವಯಿಸುವುದಿಲ್ಲ. ಹೊಸ ಬೈ-ಲಾದಂತೆ, ಕಟ್ಟಡಗಳ ಉಲ್ಲಂಘನೆಗಳನ್ನು ಸ್ಥಳೀಯ ಸಂಸ್ಥೆಗಳ ಆಯುಕ್ತರು ಪರಿಶೀಲಿಸಿ, ನಿಗದಿಪಡಿಸಿದ ಅನ್ವಯವಾಗುವ ಶುಲ್ಕವನ್ನು ಪಾವತಿಸಿಕೊಂಡು ಸಕ್ರಮಗೊಳಿಸುತ್ತಾರೆ. ನಂತರ, ಪರಿಷ್ಕೃತ ಕಟ್ಟಡ ನಕ್ಷೆಯನ್ನು ಮಾಲೀಕರಿಗೆ ನೀಡಲಾಗುತ್ತದೆ. ಫ್ಲೋರ್ ಏರಿಯಾ ರೇಷಿಯೊ ಮತ್ತು ಕಾರ್ ಪಾರ್ಕಿಂಗ್ಗೆ ಸಂಬಂಧಿಸಿದಂತೆ ಶೇ. 5ರಷ್ಟು ಉಲ್ಲಂಘನೆಯಾಗಿದ್ದರೂ, ಅದನ್ನೂ ಸಕ್ರಮಗೊಳಿಸಲು ಈ ಬೈ-ಲಾದಲ್ಲಿ ಅವಕಾಶ ನೀಡಲಾಗಿದೆ.