ಬೆಂಗಳೂರು: ರಾಜ್ಯದಲ್ಲಿ ಅಗ್ನಿ ದುರಂತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಿರಾಕ್ಷೇಪಣಾ ಪತ್ರ(ಎನ್ಒಸಿ) ನಿಯಮ ಪರಿಷ್ಕರಣೆ ಮಾಡಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿಯಮದಂತೆ 21 ಮೀಟರ್ ಎತ್ತರದ ಕಟ್ಟಡಗಳಿಗೆ ಎನ್ಒಸಿ ಕಡ್ಡಾಯ ಮಾಡಲಾಗಿತ್ತು. ಇನ್ನು ಮುಂದೆ 15 ಮೀಟರ್ ಎತ್ತರದ ಕಟ್ಟಡಗಳಿಗೂ ಎನ್ಒಸಿ ಕಡ್ಡಾಯವಾಗಿದೆ. ಕಟ್ಟಡದ ಎತ್ತರವನ್ನು 21ರಿಂದ 15 ಮೀಟರ್ ಗೆ ರಾಜ್ಯ ಸರ್ಕಾರ ಪರಿಷ್ಕರಿಸಿದೆ.
ಅಂದಾಜು ನಾಲ್ಕು ಅಂತಸ್ತಿನ ಕಟ್ಟಡಗಳಿಗೂ ಎನ್ಒಸಿ ಕಡ್ಡಾಯವಾಗಿದೆ. ಶೈಕ್ಷಣಿಕ ಕಟ್ಟಡ, ವಸತಿ, ಆಸ್ಪತ್ರೆ, ವಾಣಿಜ್ಯ, ಕೈಗಾರಿಕೆ, ಗೋದಾಮಿನ ಉಪಯೋಗಕ್ಕಾಗಿ ಬಹುಮಹಡಿಯ 15 ಮೀಟರ್ ಎತ್ತರದ ಕಟ್ಟಡಗಳಿಗೆ ಕಡ್ಡಾಯವಾಗಿ ಎನ್ಒಸಿ ಪತ್ರ ಪಡೆಯುವ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.