ಶಿವಮೊಗ್ಗ: ಮದುವೆಗೆ ಮೊದಲೇ 21 ವರ್ಷದ ಪುತ್ರಿ ಗರ್ಭಿಣಿಯಾಗಿದ್ದು, ಮರ್ಯಾದೆಗೆ ಅಂಜಿದ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ನಡೆದಿದೆ.
ಪುತ್ರಿ ಗರ್ಭಿಣಿಯಾಗಿರುವ ವಿಚಾರ ತಿಳಿದುಕೊಂಡ ಆರೋಪಿ ತಂದೆ ಆಸ್ಪತ್ರೆಗೆ ಹೋಗೋಣ ಎಂದು ಹೇಳಿ ಪತ್ನಿ ಹಾಗೂ ಪುತ್ರಿಯನ್ನು ಸೊರಬ ತಾಲೂಕಿನ ಉಳವಿ ಸಮೀಪದ ಕಾನಹಳ್ಳಿ ಬಳಿ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಕಾಡಿನಲ್ಲಿ ಮಗಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಪುತ್ರಿಯನ್ನು ಸಾಯಿಸಬೇಡಿ ಎಂದು ಪತ್ನಿ ಕಾಲಿಗೆ ಬಿದ್ದು ಕೇಳಿಕೊಂಡರೂ ಒಪ್ಪಿಲ್ಲ. ಈ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮಗಳು ಮೃತಪಟ್ಟಿರಬಹುದು ಎಂದು ಭಾವಿಸಿ ಇಬ್ಬರೂ ಸ್ಥಳದಿಂದ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ಯುವತಿಗೆ ಪ್ರಜ್ಞೆ ಬಂದಿದ್ದು, ಕಾಡಿನಿಂದ ರಸ್ತೆಯವರೆಗೂ ನಡೆದುಕೊಂಡು ಬಂದು ಸ್ಥಳೀಯರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯಿಂದ ದೂರು ಪಡೆದುಕೊಂಡ ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.