ಬೆಂಗಳೂರು: ಸಂಪುಟದ ಭಿನ್ನಾಭಿಪ್ರಾಯದ ಹೊರತಾಗಿಯೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ನಿಗದಿಯಂತೆ ಸೆ. 22 ರಿಂದ ಅ. 7ರವರೆಗೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಕುಟುಂಬ ಸದಸ್ಯರಿಂದ ದತ್ತಾಂಶ ಸಂಗ್ರಹಕ್ಕೆ ಇ-ಕೆವೈಸಿ ಅಗತ್ಯ ಕಂಡು ಬಂದರೆ ಅದರ ಬದಲಿಗೆ ಫೇಸ್ ರೆಕಗ್ನಿಷನ್ ದೃಢೀಕರಣದ ಮೂಲಕ ಮುಂದುವರೆಯಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತೀರ್ಮಾನ ಕೈಗೊಂಡಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಪಡಿತರ ಚೀಟಿಯಲ್ಲಿ ದಾಖಲಾಗಿದ್ದರೆ ದತ್ತಾಂಶ ಸಂಗ್ರಹ ಕಾರ್ಯ ಸುಗಮವಾಗಿ ನಡೆಯಲಿದೆ. ಒಂದು ವೇಳೆ ಒಂದಿಬ್ಬರು ಸದಸ್ಯರ ಹೆಸರು ಪಡಿತರ ಚೀಟಿಯಲ್ಲಿ ಇಲ್ಲವಾದಲ್ಲಿ ಅವರ ಆಧಾರ್ ಧೃಡೀಕರಣಕ್ಕೆ ಇ- ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಈ ಪ್ರಕ್ರಿಯೆ ಪಾಲನೆ ಮಾಡುವುದು ತುಸು ಸವಾಲಿನದು ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳ ಆಯೋಗ ಮಾರ್ಪಾಡಿಗೆ ನಿರ್ಧರಿಸಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು ಮೂಲ ದಾಖಲೆಯಾಗಿ ನೀಡುವವರು ಇ- ಕೆವೈಸಿ ಮಾಡುವ ಸಂದರ್ಭದಲ್ಲಿ ಆ ಸದಸ್ಯರ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಸಮೀಕ್ಷೆಯ ಸಂದರ್ಭದಲ್ಲಿ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಅವರಿಂದ ಒಟಿಪಿ ಪಡೆದು ಸಮೀಕ್ಷೆ ಮುಂದುವರಿಸಬೇಕಿತ್ತು. ಆದರೆ ಇನ್ನಷ್ಟು ಚರ್ಚೆಯ ನಂತರ ಆಧಾರ್ ಸಂಬಂಧ ಇ-ಕೆವೈಸಿ ದೃಢೀಕರಣದ ಬದಲಿಗೆ ಫೇಸ್ ರೆಕಗ್ನಿಷನ್ ದೃಢೀಕರಣದ ಮೂಲಕ ದತ್ತಾಂಶ ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಸಮೀಕ್ಷೆಯನ್ನು ಇನ್ನಷ್ಟು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಆಧಾರ್ ಇ-ಕೆವೈಸಿ ಬದಲಿಗೆ ಫೇಸ್ ರೆಕಗ್ನಿಷನ್ ಮೂಲಕ ಸಮೀಕ್ಷೆ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.