ನವದೆಹಲಿ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ವಿರುದ್ಧ ಆಡಿಯೋ ಕ್ಲಿಪ್ , ದಾಖಲೆಗಳ ಸಮೇತ ದೂರು ನೀಡಲಾಗಿದೆ. ಅಲ್ಲದೇ ಹಾಸನ ಸಂಸದ ಶ್ರೇಯಸ್ ಪಟೇಲ್ ವಿರುದ್ಧವೂ ದೂರು ನೀಡಲಾಗಿದೆ.
2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಶಿವರಾಮೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ಸಿಎಂ , ಡಿಸಿಎಂ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ದೇವರಾಜೆಗೌಡ, ಆಡಿಯೋ ವೈರಲ್ ಆದ ಬೆನ್ನಲ್ಲೇ ನಾನು ಸಿಬಿಐಗೆ ದೂರು ನೀಡಿದ್ದೆ. ಸಿಬಿಐ ಚುನಾವಣಾ ಆಯೋಗಕ್ಕೆ ದೂರು ವರ್ಗಾವಣೆ ಮಾಡಿದೆ. ಆಯೋಗ ಮಾಹಿತಿ ನೀಡುವಂತೆ ನನಗೆ ಇ-ಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಖುದ್ದು ದೆಹಲಿಗೆ ಆಗಮಿಸಿ ದಾಖಲೆಗಳನ್ನು ನೀಡಿದ್ದೇನೆ. ಇದರಲ್ಲಿ ಸಿಎಂ, ಡಿಸಿಎಂ ಹೆಸರೂ ಉಲ್ಲೇಖವಾಗಿದೆ ಎಂದಿದ್ದಾರೆ.