ಚಿಕ್ಕಮಗಳೂರು : ಚಿಕ್ಕಮಗಳೂರು ಕಡೆ ನೀವು ಟ್ರಿಪ್ ಹೊರಟಿದ್ದೀರಾ..? ಈಗಲೇ ಕ್ಯಾನ್ಸಲ್ ಮಾಡಿ . ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶೃಂಗೇರಿ, ಹೊರನಾಡು, ಮುಳ್ಳಯ್ಯನಗಿರಿ ಕಡೆ ಬರುವ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಹಲವು ಕಡೆ ರಸ್ತೆಗಳ ಮೇಲೆ ಗುಡ್ಡ ಕುಸಿಯುತ್ತಿದೆ. ಹಲವು ಕಡೆ ವಿದ್ಯುತ್ ಕಂಬಗಳ ನೆಲಕ್ಕುರುಳುತ್ತಿದೆ. ಇಂತಹ ಸಮಯದಲ್ಲಿ ಟ್ರಿಪ್ ಹೊರಡುವುದು ಬಹಳ ಅಪಾಯಕಾರಿ.
ಮೇಗೂರಿನಿಂದ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬೃಹತ್ ಮರ ಬಿದ್ದಿದ್ದು, ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಸ್ಥಳೀಯರು, ಪೊಲೀಸರಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಚಿಕ್ಕಮಗಳೂರು ತಾಲ್ಲೂಕಿನ ಕೈಮರ ಚೆಕ್ ಪೋಸ್ಟ್ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗುರುಳಿದ ಪರಿಣಾಮ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.
ಬಿರುಗಾಳಿ ಮಳೆಯಿಂದಾಗಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಸಂಪೂರ್ಣ ಬಂದ್ ಆಗಿದೆ.ಕೈಮರದಿಂದ ದತ್ತಪೀಠ ಹಾಗೂ ಮುಳ್ಲಯ್ಯನಗಿರಿಗೆ ಹೋಗುವ ಮಾರ್ಗದಲ್ಲಿ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.