ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹಲವು ಬುರುಡೆ, ಮೂಳೆಗಳು, ಸೀರೆ, ಹಗ್ಗ ಮೊದಲಾದ ವಸ್ತುಗಳು ಪತ್ತೆಯಾಗಿವೆ.
ಬಂಗ್ಲಗುಡ್ಡದ ಮರವೊಂದರ ಕೆಳಗೆ ಹೆಣಗಳ ರಾಶಿಯನ್ನೇ ತಾನು ನೋಡಿದ್ದೆ. ವಾಮಾಚರಕ್ಕೆ ಬಳಸುವಂತಹ ವಸ್ತುಗಳು ಅಲ್ಲಿದ್ದವು ಎಂದು ವಿಠಲಗೌಡ ಹೇಳಿಕೆ ನೀಡಿದ್ದ. ಈ ಪ್ರಕರಣದ ಬೆನ್ನು ಹತ್ತಿರುವ ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ಡದ ಅರಣ್ಯದೊಳಗೆ ತೀವ್ರ ಶೋಧ ನಡೆಸಿದೆ. ಮಹಜರು ವೇಳೆ ಭೂಮಿಯ ಮೇಲ್ಭಾಗದಲ್ಲಿಯೇ 5 ಕಡೆಗಳಲ್ಲಿ 5 ಬುರುಡೆಗಳು, ಅಸ್ಥಿಪಂಜರಗಳು ಪತ್ತೆಯಾಗಿವೆ. ಮರದಲ್ಲಿ ಎರಡು ಹಗ್ಗ, ಸೀರೆ ಕೂಡ ಪತ್ತೆಯಾಗಿದ್ದು, ಅದರ ಬಳಿ ಮೂಳೆಗಳು ಪತ್ತೆಯಾಗಿವೆ. ನೇಣು ಬಿಗಿದಿರುವ ಅನುಮಾನ ವ್ಯಕ್ತವಾಗಿದೆ.
ಮಹಜರು ವೇಳೆ ತಜ್ಞವೈದ್ಯರ ತಂಡವೂ ಸ್ಥಳದಲ್ಲಿ ಉಪಸ್ಥಿತಿಯಿದ್ದು, ಪತ್ತೆಯಾಗಿರುವ ಬುರುಡೆ, ಮೂಳೆಗಳು ಪುರುಷನದ್ದು ಎಂದು ತಿಳಿಸಿದ್ದಾರೆ. ಎಲ್ಲಾ ಮೂಳೆ, ಅಸ್ಥಿಪಂಜರ ಹಾಗೂ ಮಣ್ಣನ್ನು ಸಂಗ್ರಹಿಸಿರುವ ಅಧಿಕಾರಿಗಳು ಎಫ್ ಎಸ್ ಎಲ್ ಗೆ ವಾನಿಸಿದ್ದಾರೆ ಎಂದು ತಿಳಿದುಬಂದಿದೆ.