ದಾವಣಗೆರೆ: ಕೆಮ್ಮಿನ ಸಿರಪ್ ಸೇವಿಸಿದ್ದ 24 ಮಕ್ಕಳು ಸಾವನ್ನಪ್ಪಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಜೀವಕ್ಕೆ ಮಾರಕವಾಗುವ ಕೋಲ್ಡ್ರಿಪ್ ಸಿರಪ್ ನ್ನು ದೇಶಾದ್ಯಂತ ನಿಷೇಧಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯದಲ್ಲಿಯೂ ಸಿರಪ್ ಗಳ ಮೇಲೆ ನಿಗಾವಹಿಸಲಾಗಿದೆ.
ದಾವಣಗೆರೆಯಲ್ಲಿ ಅಮಲು ಬರಿಸುವ ಸಿರಪ್ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಸವನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, 1.24 ಲಕ್ಷ ರೂಪಾಯಿ ಮೌಲ್ಯದ ಸಿರಪ್ ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ದೇವರಾಜ್ ಅರಸ್ ಬಡವಾಣೆಯ ಫ್ಲೈಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಅಮಲು ಬರಿಸುವ ಸಿರಪ್ ನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ವೈದ್ಯರ ಸಲಹೆ ಇಲ್ಲದೇ ಯುವಕರಿಗೆ ಹಾಗೂ ವ್ಯಸನಿಗಳಿಗೆ ಈ ಸಿರಪ್ ಪೂರೈಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಆಧರಿಸಿ ದಾವಣಗೆರೆ ಎಸ್ ಪಿ ಕಚೇರಿಯ ಮಾದಕ ದ್ರವ್ಯ ನಿಗ್ರಹ ಪಡೆ ದಾಳಿ ನಡೆಸಿದೆ. ಐವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆಯ ಶಿವಕುಮಾರ್ (38), ಮಹಬೂಬ್ ನಗರದ ಅಜಿಮುದ್ದೀನ್ (37), ದೇವರಾಜ್ ಅರಸ ಬಡಾವಣೆಯ ಮಹಮ್ಮದ್ ಶಾರಿಕ್ (35), ಚನ್ನಗಿರಿ ತಾಲೂಕಿನ ಟೌನ್ ನಿವಾಸಿ ಅಬ್ದುಲ್ ಗಫರ್ (48) ಸೇರಿದಂತೆ ಐವರನ್ನು ಬಂಧಿಸಲಾಗಿದೆ.