ದಾವಣಗೆರೆ: ಹೆರಿಗೆಯಾದ ಎರಡೇ ದಿನಕ್ಕೆ ಬಾಣಂತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ವೈದ್ಯರ ನಿರ್ಲಕ್ಷವೇ ಬಾಣಂತಿ ಸಾವಿಗೆ ಕಾರಣ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ದುರ್ಗಮ್ಮ (21) ಮೃತ ಬಾಣಂತಿ. ದುರ್ಗಳಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಎರಡೇ ದಿನಕ್ಕೆ ಬಾಅಣಂತಿ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ.
ಹೆರಿಗೆಗೆಂದು ತಾಯಿ ಮನೆಗೆ ಬಂದಿದ್ದ ದುರ್ಗಮ್ಮಳಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಹರಪನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಬಳಿಕ ದುರ್ಗಮ್ಮಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 12 ಬಾಟಲ್ ರಕ್ತ ಸೇರಿಸಿದ್ದರು. ಬಳಿಕ ಗರ್ಭಕೋಶ ತೆಗೆಯಬೇಕು ಎಂದು ವೈದ್ಯರು ಹೇಳಿದ್ದರು. ಎಲ್ಲವನ್ನೂ ಮಾಡಿಸಿದರೂ ನಮ್ಮ ಮಗಳು ಬದುಕು ಉಳಿಯಲಿಲ್ಲ. ತೀವ್ರ ರಕ್ತಸ್ರಾವವಾಗುತ್ತಿದೆ, ರಕ್ತ ಸೇರಿಸಬೇಕು ಎಂದು ವೈದ್ಯರು ನಮಗೆ ಹೇಳಿಲ್ಲ. ಅಲ್ಲದೇ ಮಗಳನ್ನು ನೋಡಲು ಕೂಡ ಬಿಟ್ಟಿರಲಿಲ್ಲ. ಇದೀಗ ಮಗಳು ಸಾವನ್ನಪ್ಪಿದ್ದಾಳೆ ಎಂದಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.