ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಮನೆ ಮೇಲೆ ಗುಡ್ದ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಗು ಆರುಷ್ ಹಾಗೂ ತಾಯಿ ಅಶ್ವಿನಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದು, ಐದು ಜನರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಕಾಂತಪ್ಪ ಪೂಜಾರಿ ಅವಶೇಷಗಳಡಿಯಿಂದ ಹೊರಬಂದು ಬಚಾವ್ ಆಗಿದ್ದರು. ಮಣ್ಣಿನಡಿ ಸಿಲುಕಿದ್ದ ಅವರ ಪತ್ನಿ ಪ್ರೇಮಾ ಪೂಜಾರಿ (58) ಹಾಗೂ ಮೊಮ್ಮಗ ಆರ್ಯನ್ ಇಬ್ಬರು ಸಾವನ್ನಪ್ಪಿದ್ದಾರು. ಕಟ್ಟಡ, ಮಣ್ಣಿನ ಅವಶೇಷಗಳಡಿ ಸಿಲುಕಿ ನರಳಾಡುತ್ತಿದ್ದ ಸೊಸೆ ಅಶ್ವಿನಿ ಹಾಗೂ ಅವರ ಮಗು ಆರುಷ್ ರಕ್ಷಣೆಗಾಗಿ ನಿರಂತರ 10 ಗಂಟೆಗಳ ಕಾಲ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್ಫ್. ತಂಡ ಕಾರ್ಯಾಚರಣೆ ನಡೆಸಿತ್ತು. ಸತತ ಕಾರ್ಯಾಚರಣೆ ಬಳಿಕ ಮಗು ಆರುಷ್ ನನ್ನು ರಕ್ಷಿಸಲಾಗಿತ್ತು.
ಇದೀಗ ಆರುಷ್ ತಾಯಿ ಅಶ್ವಿನಿ ಅವರನ್ನು ಅವಶೇಷಗಳಡಿಯಿಂದ ಸುರಕ್ಷಿತವಾಗಿ ಹೊರತರಲಾಗಿದ್ದು, ಸುಮಾರು 10 ಗಂಟೆಗಳ ಕಾಲ ನಿರಂತರವಾಗಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ತಾಯಿ-ಮಗುವನ್ನು ರಕ್ಷಿಸಲಾಗಿದೆ.
ಆದರೆ ಗುಡ್ಡ ಕುಸಿತ ಪ್ರಕರಣದಲ್ಲಿ ಅಜ್ಜಿ ಹಾಗೂ ಮೊಮ್ಮಗ ಸಾವನ್ನಪ್ಪಿದ್ದಾರೆ.