ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚನೆಗೆ ಸಿಎಂ ಸೂಚನೆ: ಸಿದ್ಧತೆ ನಡೆದಿದೆ ಎಂದ ಡಿಸಿಎಂ

ಬೆಂಗಳೂರು: ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನಾ ಕೇಂದ್ರ ಕಟ್ಟಡಗಳ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೆಐಎಡಿಬಿ ವತಿಯಿಂದ ಶೇ.20 ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಸಣ್ಣ ಕೈಗಾರಿಕೆಗಳಿಗೆ ನಾವು ಒತ್ತು ನೀಡಬೇಕು. ಕಾರ್ಮಿಕರ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಚರ್ಚೆ ಮಾಡುತ್ತೇವೆ ಎಂದರು.

ನನಗೆ ಸಣ್ಣ ಕೈಗಾರಿಕಾ ವಲಯದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಈ ವಲಯ ಎಷ್ಟು ಉದ್ಯೋಗ ಸೃಷ್ಟಿಸುತ್ತದೆ, ಎಷ್ಟು ಶ್ರಮಿಸುತ್ತದೆ ಎಂದು ನಾನು ನೋಡಿದ್ದೇನೆ. ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚು ಒತ್ತಡವನ್ನು ಸರ್ಕಾರಗಳ ಮೇಲೆ ಹಾಕಬೇಕು. ಆಗ ಮಾತ್ರ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಯಶಸ್ಸು ಸಿಗಲು ಸಾಧ್ಯ. ಕೇಂದ್ರ ಸರ್ಕಾರ ದೊಡ್ಡ ಯೋಜನೆ ಘೋಷಣೆ ಮಾಡುತ್ತದೆ. ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಬೇಕು ಎಂದು ಹೇಳುತ್ತದೆ. ಆದರೆ ಬ್ಯಾಂಕಿನವರು ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಳೇ ಉದ್ಯಮಿಗಳಿಗೆ ಸಹಕಾರ ನೀಡುವಂತೆ ಹೊಸಬರಿಗೆ ಸಹಕಾರ ನೀಡುವುದಿಲ್ಲ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಶಕ್ತಿ ತುಂಬಬೇಕಿದೆ. ನಮ್ಮ ನೀತಿಗಳು ಕೈಗಾರಿಕೆಗಳಿಗೆ ಉದಾರವಾಗಿರಬೇಕು, ಆಕರ್ಷಣೀಯವಾಗಿರಬೇಕು. ಬೇರೆ ರಾಜ್ಯಗಳಲ್ಲಿ ಹೆಚ್ಚು ಆಕರ್ಷಕವಾದ ನೀತಿ ರೂಪಿಸುತ್ತಾರೆ. ಆದರೆ ಅಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲಗಳಿಲ್ಲ. ದೊಡ್ಡ ದೊಡ್ಡ ಸಂಸ್ಥೆಗಳ ಮುಖ್ಯಸ್ಥರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಾನು ಮೊನ್ನೆ ಗುಬ್ಬಿಗೆ ಹೋಗಿ ಅಲ್ಲಿ ನಿರ್ಮಿಸಲಾಗಿರುವ 10.47 ಕಿ.ಮೀ ಉದ್ದದ ಮೇಲ್ಗಾಲುವೆಯನ್ನು ವೀಕ್ಷಣೆ ಮಾಡಿದೆ. ಸುಮಾರು 40 ಮೀ. ಎತ್ತರದ ಮೇಲ್ಗಾಲುವೆ ಇದಾಗಿದೆ. ವಿಶ್ವಮಟ್ಟದ ಯೋಜನೆ ಮಾಡುವ ಇಂಜಿನಿಯರ್ ಗಳು ನಮ್ಮಲ್ಲಿ ಇದ್ದಾರೆ” ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read