ಬೆಂಗಳೂರು: ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ. ಅವು ಕೇವಲ ಶಬ್ದ ಮಾತ್ರ ಮಾಡುತ್ತವೆ. ಬರೀ ಶಬ್ದ ಮಾಡುವವರು ಸಂಸತ್ ನಲ್ಲಿ ಮಾತನಾಡಿ, ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬರೀ ಶಬ್ದ ಮಾಡುವವರಿಗೂ ನಾನು ಅನುದಾನದ ವಿಚಾರವಾಗಿ ಎಲ್ಲಾ ಮಾಹಿತಿಗಳನ್ನು ಕಳುಹಿಸಿ ಕೊಡುತ್ತಿದ್ದೇನೆ. ಏಕೆಂದರೆ ಇದುವರೆಗೂ ಯಾರೊಬ್ಬರು ಅನುದಾನ ತಂದಿಲ್ಲ, ತರಲು ಆಸಕ್ತಿಯನ್ನೂ ತೋರಿಲ್ಲ. ಪ್ರಧಾನಿಯವರನ್ನೂ ಭೇಟಿ ಮಾಡಿಲ್ಲ. ರಾಜ್ಯಕ್ಕೆ, ಅದರಲ್ಲೂ ಬೆಂಗಳೂರಿಗಂತೂ ಏನೇನೂ ತಂದಿಲ್ಲ ಎಂದರು.
ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಿದೆ. ಅವರು ನಮ್ಮ ಮನವಿಯನ್ನು ಗಮನಿಸುವುದಾಗಿ ತಿಳಿಸಿದ್ದಾರೆ. ಅವರು ಮಾತನಾಡಿದ ಶೈಲಿ ನೋಡಿದರೆ ನನಗೆ ಅವರ ಮಾತಿನ ಮೇಲೆ ಭರವಸೆಯಿದೆ. ಬೆಂಗಳೂರು ಜಾಗತಿಕ ನಗರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಬೆಂಗಳೂರು ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳು ಕೊಡುಗೆ ನೀಡಿವೆ. ನಾನು ಒಬ್ಬನೇ ಅಥವಾ ನಮ್ಮ ಸರ್ಕಾರದಿಂದಲೇ ಎಲ್ಲಾ ಆಗಿದೆ ಎಂದು ಹೇಳುವುದಿಲ್ಲ. ಬೆಂಗಳೂರು ದೇಶದಲ್ಲಿಯೇ ಪ್ರಮುಖ ನಗರವಾಗಿದೆ. ಇದನ್ನು ಇನ್ನೂ ಅತ್ಯುತ್ತಮ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ರಾಜಕೀಯಕ್ಕಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದರು.