ಬೆಂಗಳೂರು: ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಜೂನ್ 1ರಿಂದ 25ರವರೆಗೆ ದುಬೈ ಹಾಗೂ ಯುರೋಪ್ ಪ್ರವಾಸಕ್ಕೆ ತೆರಳದ ನಟ ದರ್ಶನ್ ಅವರಿಗೆ ಬೆಂಗಳೂರು 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಈ ಆದೇಶ ನೀಡಿದ್ದಾರೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರು ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಬೇಕಿದ್ದು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡ ನಂತರ ಭಾರತಕ್ಕೆ ಮರಳುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ. ದರ್ಶನ್ ಕನ್ನಡ ಚಿತ್ರರಂಗದ ನಟರಾಗಿದ್ದು, ನಟನೆ ಮೂಲಕ ಕುಟುಂಬದ ಆದಾಯ ಗಳಿಸುವ ಸದಸ್ಯರಾಗಿದ್ದಾರೆ. ಮುಂದಿನ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತು ವಿಧಿಸಿ ವಿದೇಶಕ್ಕೆ ತೆರಳಲು ದರ್ಶನ್ ಗೆ ಅನುಮತಿ ನೀಡುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ಜೂ. 1 ರಿಂದ 25 ರವರೆಗೆ ದರ್ಶನ್ ವಿದೇಶಕ್ಕೆ ತೆರಳಬಹುದು. ವಿದೇಶದಿಂದ ಬಂದ ನಂತರ ಯಾವುದೇ ವಿನಾಯಿತಿ ಕೋರದೆ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.