ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿರುಗಾಳಿ ಮಳೆಯಾಗುತ್ತಿದ್ದು, ವರುಣಾರ್ಭಟದ ನಡುವೆ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ವರ್ಷಧಾರೆಯ ನಡುವೆ ನಯನಮನೋಹರ ಜಲಪಾತ, ಪ್ರವಾಸಿ ತಾಣಗಳನ್ನು ನೋಡಲೆಂದು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೀಗೆ ಬಂದ ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರವೊಂದು ಮುರಿದು ಬಿದ್ದಿರುವ ಘಟನೆ ಕಾಫಿನಾಡಲ್ಲಿ ನಡೆದಿದೆ.
ಕಲ್ಲತ್ತಗಿರಿ ಫಾಲ್ಸ್ ನೋಡಲೆಂದು ಬಂದಿದ್ದ ಪ್ರವಾಸಿಗರ ಕಾರಿನ ಮೇಲೆ ಬಿರುಗಾಳಿ ಮಳೆಗೆ ಬೃಹತ್ ಮರ ಮುರಿದು ಬಿದ್ದಿದೆ. ಕಾರು ಸಂಪೂರ್ಣ ನುಜ್ಜುಗುಜಾಗಿದೆ. ಪ್ರವಾಸಿಗರು ಕಾರು ನಿಲ್ಲಿಸಿ ಜಲಪಾತ ವೀಕ್ಷಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಕಾರಿನಲ್ಲಿ ಯಾರೂ ಇರಲಿಲ್ಲವಾದ್ದರಿಂದ ಭಾರಿ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ. ಕಾರಿನ ಬಳಿ ಬಂದು ನೋಡುವಷ್ಟರಲ್ಲಿ ಕಾರು ಮರದ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದೆ. ಸ್ಥಳಕ್ಕೆ ಲಿಂಗದಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.