ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯದಲ್ಲಿ ಐದು ಹುಲಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವಿಷ ಪ್ರಾಶನದಿಂದಲೇ ಹುಲಿಗಳು ಸಾವನ್ನಪ್ಪಿವೆ ಎಂದು ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ತಿಳಿಸಿದ್ದಾರೆ.
ಹುಲಿಗಳ ಮರಣೋತ್ತರ ಪರೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿಎಫ್, ವಿಷ ಪ್ರಾಶನದಿಂದಲೇ ಹುಲಿಗಳು ಸಾವನ್ನಪ್ಪಿವೆ. ಹುಲಿಗಳ ಹಾಗೂ ಸಮೀಪವೇ ಇದ್ದ ಹಸುವಿನ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿಗಳ ದೇಹ ಸೇರಿರುವ ವಿಷ ಯಾವುದು, ಪ್ರಮಾಣ ಎಷ್ಟಿತ್ತು ಎಂಬ ಬಗ್ಗೆ ವರದಿ ಬಂದ ಬಳಿಕ ಮಾಹಿತಿ ತಿಳಿಯಲಿದೆ ಎಂದರು.
ತಾಯಿ ಹುಲಿಗೆ 10 ವರ್ಷ. ಮರಿಗಳಿಗೆ 8-10 ತಿಂಗಳಾಗಿದ್ದವು. ಮೂರು ದಿನಗಳ ಹಿಂದೆಯೇ ಹುಲಿಗಳು ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.
ಹುಲಿ ಬೇಟೆ ನಂತರ ಹಸುವಿನ ಕಳೇಬರಹಕ್ಕೆ ವಿಷ ಹಾಕಲಾಗಿತ್ತೇ? ಅಥವಾ ವಿಷಪ್ರಾಶನವಾದ ಹಸುವನ್ನು ಕಾಡಿನೊಳಗೆ ಇಡಲಾಗಿತ್ತೇ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೃತ ಹಸುವಿನ ಮಾಲೀಕನ ಪತ್ತೆ ಕಾರ್ಯವೂ ನಡೆಯುತ್ತಿದೆ ಎಂದು ಹೇಳಿದರು.