ಬಿಜೆಪಿ ಪಕ್ಷದ ಶಿಸ್ತು ಸಮಿತಿಯಿಂದ ನೀಡಲಾದ ಶೋಕಾಸ್ ನೋಟಿಸ್ಗೆ ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ರಾಜಕಾರಣದಲ್ಲಿ ಹೆದರುವ ಕಾಲ ಮುಗಿದಿದೆ” ಎಂದು ಹೆಬ್ಬಾರ್ ಹೇಳಿದರೆ, “ನನ್ನ ಜನಪ್ರಿಯತೆ ಸಹಿಸದವರು ಷಡ್ಯಂತ್ರ ಮಾಡಿದ್ದಾರೆ” ಎಂದು ಸೋಮಶೇಖರ್ ಆರೋಪಿಸಿದ್ದಾರೆ.
ಹೆಬ್ಬಾರ್ ಅವರು ಕೇಂದ್ರ ಶಿಸ್ತು ಸಮಿತಿಯ ನೋಟಿಸ್ಗೆ 24 ಗಂಟೆಗಳಲ್ಲಿ ಉತ್ತರಿಸಿದ್ದು, “ಸೂಕ್ತ ಕಾಲ ಬಂದಾಗ ಉತ್ತರವನ್ನು ಬಹಿರಂಗಪಡಿಸುವೆ” ಎಂದು ಹೇಳಿದ್ದಾರೆ. ಅಲ್ಲದೆ, ಛಲವಾದಿ ನಾರಾಯಣಸ್ವಾಮಿ ಅವರ ಉಚ್ಚಾಟನೆ ಹೇಳಿಕೆಗೆ ಪ್ರತಿಕ್ರಿಯಿಸಿ, “ಅವರಿಗೆ ನನ್ನನ್ನು ಉಚ್ಚಾಟಿಸುವ ಅಧಿಕಾರವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತ, ಸೋಮಶೇಖರ್ ಅವರು ನೋಟಿಸ್ಗೆ ಉತ್ತರಿಸಿದ್ದು, “ನನ್ನ ವಿರುದ್ಧದ ಆಪಾದನೆಗಳು ಅಸ್ಪಷ್ಟ ಮತ್ತು ಸಮರ್ಥನೀಯವಲ್ಲ. ಅಲ್ಲದೇ ನನ್ನ ಸ್ವತಂತ್ರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಈ ನೋಟಿಸ್ ನೀಡಲಾಗಿದೆ” ಎಂದು ಹೇಳಿದ್ದಾರೆ. “ನನ್ನ ಜನಪ್ರಿಯತೆ ಸಹಿಸದ ಪಕ್ಷದ ಒಳಗಿನ ಮತ್ತು ಹೊರಗಿನವರು ಷಡ್ಯಂತ್ರ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.