ಬೆಂಗಳೂರು: ಒತ್ತುವರಿ ಆಗಿರುವ ವಕ್ಫ್ ಆಸ್ತಿಗಳನ್ನು ತೆರವುಗೊಳಿಸಲು ಬೋರ್ಡ್ ಸಿಇಒಗೆ(ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ) ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ವಕ್ಫ್ ಮಂಡಳಿಗೆ ಸೇರಿದ ಜಮೀನಿನ ಒತ್ತುವರಿ ತೆರವುಗೊಳಿಸಲು ಮಂಡಳಿಯ ಸಿಇಒ ಆದೇಶ ಪ್ರಶ್ನಿಸಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ನಗರದ ಸಾಹೇಬ ಲಾಲ್ ಮತ್ತು ಮನೋರುದ್ದೀನ್ ಸಲ್ಲಿಸಿದ ಅರ್ಜಿ ವಿಚಾರಣೆ ಧಾರವಾಡ ಪೀಠದಲ್ಲಿ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ವಕ್ಫ್ ಕಾಯ್ದೆಯಡಿ ತಿಳಿಸಿರುವಂತೆ ಸಿಇಒ ಅವರು ವಕ್ಪ್ ಆಸ್ತಿಗಳ ಒತ್ತುವರಿ ಸಂಬಂಧ ದೂರು ಸ್ವೀಕರಿಸುವುದು, ಒತ್ತುವರಿದಾರರಿಗೆ ನೋಟಿಸ್ ನೀಡಿ ಆಕ್ಷೇಪಣೆಗಳನ್ನು ಸ್ವೀಕರಿಸಿ ಅದನ್ನು ಪರಿಶೀಲಿಸಿ ಒತ್ತುವರಿ ತೆರವು ಮಾಡುವಂತೆ ಆದೇಶಿಸಬಹುದು. ಆದರೆ, ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ನಡೆಸಲು ಅವಕಾಶವಿಲ್ಲವೆಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಆಸ್ತಿ ಒತ್ತುವರಿ ಸಂಬಂಧ ದೂರು ದಾಖಲಾಗಿದ್ದು, ಈ ಬಗ್ಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಿ ಉದ್ದೇಶಿತ ಜಮೀನು ಮಂಡಳಿಗೆ ಸೇರಿದೆ ಎಂದು ತಿಳಿಸಿ ಒತ್ತುವರಿದಾರರು ತೆರವುಗೊಳಿಸುವಂತೆ ನಿರ್ದೇಶಿಸುವ ಆದೇಶ ಹೊರಡಿಸಿದ್ದಾರೆ. ಈ ಆದೇಶ ತೆರವು ಮಾಡಿಸುವ ಪ್ರಕ್ರಿಯೆ ಆರಂಭಿಸಿದಂತಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಒತ್ತುವರಿಯಿಂದಾಗಿ ವಕ್ಪ್ ಮಂಡಳಿಗೆ ಆಗಿರುವ ಹಾನಿಯ ಪ್ರಮಾಣ ನಿರ್ಧರಿಸಲು ಜಿಲ್ಲಾ ಸಮಿತಿಗೆ ಮನವಿ ಮಾಡಿದ್ದಾರೆ. ಜೊತೆಗೆ ಒತ್ತವರಿ ಆದೇಶಕ್ಕಾಗಿ ವಕ್ಫ್ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಲು ನಿರ್ದೇಶಿಸಿದ್ದಾರೆ. ಸಿಇಒ ಆದೇಶ ಒತ್ತುವರಿ ತೆರವುಗೊಳಿಸುವ ಆದೇಶಕ್ಕೆ ಸಮನಾಗುವುದಿಲ್ಲ. ಈ ಸಂಬಂಧ ವಕ್ಫ್ ಮಂಡಳಿ ಸೂಕ್ತ ಆದೇಶ ಹೊರಡಿಸುವವರೆಗೂ ಸಿಇಒ ಅರ್ಜಿದಾರರು ಒತ್ತುವರಿ ಮಾಡಿರುವ ಆರೋಪದ ಆಸ್ತಿಯನ್ನು ವಕ್ಪ್ ಮಂಡಳಿ ವ್ಯಾಪ್ತಿಗೆ ವಶಪಡಿಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.