ಮೈಸೂರು: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನನ್ನ ತಪ್ಪೇನಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಪೊಲೀಸರಿಗೆ ಧಮ್ಕಿ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದೇವಲ್ಲಾ? ಸರ್ಕಾರ ಎಲ್ಲಿ ತಪ್ಪು ಮಾಡಿದೆ? ಎಂದು ಸಿಎಂ ಪ್ರಶ್ನಿಸಿದ್ದಾರೆ. ವಿಧಾನಸೌಧದ ಡಿಸಿಪಿ ಬರೆದ ಪತ್ರ ನನ್ನ ಬಳಿ ಬಂದಿಲ್ಲ. ವಿಧಾನಸೌಧದಲ್ಲಿ ಏನಾದರೂ ಘಟನೆ ಆಗಿದೆಯಾ? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಯಾರು? ಅದಕ್ಕೆ ಪೊಲೀಸರನ್ನ ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಏನು ತಪ್ಪು ಮಾಡಿದ್ದಾರೆ? ನನಗೆ ಭದ್ರತೆ ಬಗ್ಗೆ ತಿಳಿಸುವವರು ಯಾರು? ಭದ್ರತೆ ಬಗ್ಗೆ ನನಗೆ ಬೆಂಗಳೂರು ಪೊಲೀಸ್ ಕಮಿಷನರ್ ತಿಳಿಸಿಲ್ಲ. ಭದ್ರತೆ ಬಗ್ಗೆ ನನಗೆ ಪೊಲೀಸರು ತಿಳಿಸಬೇಕಾ? ಬೇಡವಾ? ಇದರಲ್ಲಿ ಪೊಲೀಸರ ತಪ್ಪಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಜೊತೆಗೆ ರೆಗ್ಯುಲರ್ ಆಗಿ ಸಭೆ ನಡೆಸಿದ್ದೇನೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು. ಕುಂಭಮೇಳದಲ್ಲಿಯೂ ನೂರಾರು ಜನ ಮೃತಪಟ್ಟಿದ್ದರು. ಆಗ ಪ್ರಧಾನಮಂತ್ರಿ ರಾಜೀನಾಮೆ ಕೊಟ್ಟರಾ? ಮುಖ್ಯ ಕಾರ್ಯದರ್ಶಿ ನನ್ನನ್ನು ಕರೆದರು. ನಾನು ಕಾರ್ಯಕ್ರಮಕ್ಕೆ ಹಾಜರಾದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದಿಲ್ಲ. ಕಾಲ್ತುಳಿತದ ಬಗ್ಗೆ ಸಂಜೆ 5:45ಕ್ಕೆ ನನಗೆ ಮಾಹಿತಿ ಬಂತು. ಸ್ಟೇಡಿಯಂನಲ್ಲಿ ನಡೆದ ಘಟನೆಗೂ ನಮಗೂ ಸಂಬಂಧವಿಲ್ಲ. ರಾಜ್ಯದಲ್ಲಿ ಇಂತಹ ಘಟನೆಗಳು ಯಾವತ್ತೂ ಸಂಭವಿಸಬಾರದು ಎಂದು ಹೇಳಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರೊಬ್ಬರನ್ನೇ ಅಮಾನತು ಮಾಡಿಲ್ಲ. ಐವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಕ್ಕೆ ಬಿಜೆಪಿ ಟ್ವೀಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅನುಮತಿ ಕೊಡದಿದ್ದರೆ ಬಿಜೆಪಿ ಬೇರೆ ತರ ಬಣ್ಣ ಕಟ್ಟುತ್ತದೆ. ಅನುಮತಿ ಕೊಟ್ಟರೆ ಮತ್ತೊಂದು ರೀತಿ ಬಣ್ಣ ಕಟ್ಟುತ್ತಾರೆ. ಬಣ್ಣ ಕಟ್ಟುವುದೇ ಬಿಜೆಪಿ ಕೆಲಸ ಎಂದು ಕಿಡಿಕಾರಿದ್ದಾರೆ.