ಬೆಂಗಳೂರು: ವೃದ್ಧೆ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ದಂಪತಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಿನ್ನೆ ವೃದ್ಧೆ ಕೊಲೆ ಮಾಡಿದ್ದರು. ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಾಡಿಗೆದಾರ ದಂಪತಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ(26), ಸಾಕ್ಷಿ(23) ಅವರನ್ನು ಬಂಧಿಸಲಾಗಿದೆ. ಹತ್ಯೆಯಾದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಪ್ರಸಾದ್ ಮತ್ತು ಸಾಕ್ಷಿ ಬಾಡಿಗೆಗೆ ಇದ್ದರು. ಪ್ರಸಾದ್ ಶ್ರೀಶೈಲ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ ಶ್ರೀಲಕ್ಷ್ಮಿ ಮನೆಯಲ್ಲಿ ದಂಪತಿ ಬಾಡಿಗೆಗೆ ಇದ್ದರು.
ಶ್ರೀ ಲಕ್ಷ್ಮಿ ಕೊಲೆ ನಂತರವೂ ಮನೆಯಲ್ಲಿಯೇ ಪ್ರಸಾದ್ ಮತ್ತು ಸಾಕ್ಷಿ ಇದ್ದರು. ತಮಗೇನೂ ಗೊತ್ತಿಲ್ಲದಂತೆ ನಾಟಕ ಮಾಡಿದ್ದರು. ಸ್ಥಳಕ್ಕೆ ಪೊಲೀಸರ ಭೇಟಿಯ ವೇಳೆ ತಮಗೆನೂ ಗೊತ್ತಿಲ್ಲವೆಂದು ಹೇಳಿದ್ದರು. ವಿಚಾರಣೆಯ ವೇಳೆ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ತಾವೇ ಕೊಲೆ ಮಾಡಿ ಚಿನ್ನಾಭರಣ ದೋಚಿರುವುದಾಗಿ ದಂಪತಿ ತಪ್ಪೊಪ್ಪಿಗೆ ನೀಡಿದ್ದಾರೆ.
