ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹಾಗೂ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹಾಗೂ ಇತರೆ ಮುಖಂಡರು ಭಾನುವಾರ ಲಿಂಗನಮಕ್ಕಿ ಜಲಾಶಯದ ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
5 ಗೇಟ್ ಗಳನ್ನು ತೆರೆದು 3500 ಕ್ಯುಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗಿದೆ. ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು ಮಾತನಾಡಿ, 5 ಗೇಟ್ ಗಳ ಮೂಲಕ ಸುಮಾರು 3500 ಕ್ಯುಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗಿದೆ. ಜಲಾಶಯದ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಸಾಗರ, ಸೊರಬ ತಾಲ್ಲೂಕುಗಳ ಗ್ರಾಮಗಳು, ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಳಕೆ ಮಾಡಲಾಗುವುದು. ಹಾಗೂ ಶಿರಸಿ, ಸಿದ್ದಾಪುರಗಳಿಗೂ ನೀರನ್ನು ಕೇಳಲಾಗುತ್ತಿದೆ. ಲಿಂಗನಮಕ್ಕಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಟ್ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು ವಿದ್ಯುತ್ ಅಭಾವವನ್ನು ನೀಗಿಸಿದೆ ಎಂದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜಲಾಶಯ ಆರಂಭ 1964ರಿಂದ ಇಲ್ಲಿಯವರೆಗೆ 21 ಬಾರಿ ನೀರನ್ನು ನದಿಗೆ ಬಿಡಲಾಗಿದೆ. ಈ ನೀರನ್ನು ಜಿಲ್ಲೆಯ ಕುಡಿಯುವ ನೀರಿಗೆ ಹೊರತಾಗಿ ನೀರಾವರಿ ಸೇರಿದಂತೆ ಬೇರೆ ಯಾವ ಯೋಜನೆಗೂ ಬಳಸಿಕೊಳ್ಳಲಾಗುವುದಿಲ್ಲ ಎಂದರು.