ಬೆಂಗಳೂರು: ಬಿಎಂಟಿಸಿ ಬಸ್ ಓಡಿಸುವಾಗ ಮೊಬೈಲ್ ಬಳಸಿದ ಚಾಲಕರನ್ನು ಅಮಾನತು ಮಾಡಿ ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯಲು ಆದೇಶಿಸಲಾಗಿದೆ.
ಇತ್ತೀಚೆಗೆ ಬಿಎಂಟಿಸಿ ಬಸ್ ಅಪಘಾತ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಬಸ್ ಚಾಲನೆಯ ವೇಳೆಯಲ್ಲಿ ಚಾಲಕರು ಮೊಬೈಲ್ ಬಳಸಿದರೆ ಅಮಾನತು ಮತ್ತು ವಾರ್ಷಿಕ ವೇತನ ಬಡ್ತಿ ತಡೆಯಲು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.
ಬಿಎಂಟಿಸಿ ಬಸ್ ಗಳಿಂದ ಆಗುತ್ತಿರುವ ಅಪಘಾತಗಳ ತಡೆಗೆ ಆಡಳಿತ ಮಂಡಳಿ ಅನೇಕ ಕ್ರಮ ಕೈಗೊಂಡಿದೆ. ಬಸ್ ಚಾಲನೆಯ ವೇಳೆ ಮೊಬೈಲ್ ನಲ್ಲಿ ಮಾತನಾಡುವುದು, ಹಾಡು ಕೇಳುವುದು, ಮೆಸೇಜ್ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ.
ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ಮೊದಲ ಬಾರಿ ಪ್ರಕರಣ ದಾಖಲಾದರೆ ಚಾಲಕರನ್ನು 15 ದಿನ ಅಮಾನತು, 5 ಸಾವಿರ ರೂಪಾಯಿವರೆಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ. ಇದರೊಂದಿಗೆ ಮೊಬೈಲ್ ಬಳಕೆ ಮಾಡುವುದನ್ನು ಮುಂದುವರೆಸಿದಲ್ಲಿ ವರ್ಗಾವಣೆ, ವೇತನ ಬಡ್ತಿ ತಡೆ, 30 ಸಾವಿರ ರೂ.ವರೆಗೆ ದಂಡ ವಿಧಿಸುವ ಕುರಿತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಶಿಸ್ತು ಪಾಲನಾ ಅಧಿಕಾರಿಗಳು ಮೊಬೈಲ್ ಬಳಕೆ ಪ್ರಕರಣದ ಬಗ್ಗೆ ಪರಿಶೀಲಿಸಿ ಚಾಲಕರಿಗೆ ಶಿಕ್ಷೆ ವಿಧಿಸಬೇಕು ಎಂದು ತಿಳಿಸಲಾಗಿದೆ.