ಮುಂಬೈ: ‘ನಮ್ಮಿಂದಾಗಿ ನಿಮಗೆ ಬಟ್ಟೆ ಇದೆ’ ಎಂದು ಕಲ್ಯಾಣ ಫಲಾನುಭವಿಗಳ ಬಗ್ಗೆ ಬಿಜೆಪಿ ಶಾಸಕರೊಬ್ಬರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕ ಬಬನ್ರಾವ್ ಲೋನಿಕರ್ ಅವರು ಪಕ್ಷವನ್ನು ಟೀಕಿಸುವವರು ತಮ್ಮ ಭೌತಿಕ ಆಸ್ತಿ ಮತ್ತು ಸವಲತ್ತುಗಳನ್ನು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಬೇಕೆಂದು ಹೇಳುವ ಮೂಲಕ ರಾಜಕೀಯ ಕೋಲಾಹಲವನ್ನು ಹುಟ್ಟುಹಾಕಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ನೀಡಿದ ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಟ್ಟೆ, ಫೋನ್, ಹಣ… ಎಲ್ಲವೂ ನಮ್ಮಿಂದಲೇ:
‘ಹರ್ ಘರ್ ಸೋಲಾರ್’ ಯೋಜನೆಯ ಕುರಿತು ನಡೆದ ಕಾರ್ಯಕ್ರಮದಲ್ಲಿ ತಮ್ಮ ಪರೂರ್ ಕ್ಷೇತ್ರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಲೋನಿಕರ್, ಕೆಲವು ಜನ ವಿಶೇಷವಾಗಿ ಯುವಕರು ನಮ್ಮನ್ನು ಆನ್ಲೈನ್ನಲ್ಲಿ ನಿರಂತರವಾಗಿ ಟೀಕಿಸುತ್ತಾರೆ. ನಿಮ್ಮ ಹಳ್ಳಿಯಲ್ಲಿರುವ ನೀರಿನ ಟ್ಯಾಂಕ್ ಗಳು, ಕಾಂಕ್ರೀಟ್ ರಸ್ತೆಗಳು, ಸಮುದಾಯ ಭವನಗಳು ಮತ್ತು ವಿವಿಧ ಕಲ್ಯಾಣ ಯೋಜನೆಗಳು ಇವೆಲ್ಲವೂ ನಮ್ಮಿಂದ ಬಂದವು. ನಾವು ನಿಮ್ಮ ತಾಯಂದಿರಿಗೆ ಸಂಬಳ, ನಿಮ್ಮ ತಂದೆಗೆ ಪಿಂಚಣಿ ಮತ್ತು ಪ್ರಧಾನಿ ಮೋದಿಯವರ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಬಿತ್ತನೆಗಾಗಿ 6,000 ರೂ.ಗಳನ್ನು ಸಹ ನೀಡಿದ್ದೇವೆ. ನೀವು ಬಳಸುವ ಬಟ್ಟೆ, ಬೂಟುಗಳು ಮತ್ತು ಮೊಬೈಲ್ ಫೋನ್ ಗಳು ಇವುಗಳು ಸಹ ನಮ್ಮ ಕಾರಣದಿಂದಾಗಿವೆ ಎಂದು ಹೇಳಿದ್ದಾರೆ.
ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲೋನಿಕರ್ ಅವರ ಹೇಳಿಕೆಗಳಿಂದ ಪಕ್ಷವನ್ನು ದೂರವಿಟ್ಟರು, ಅವುಗಳನ್ನು ‘ಸಂಪೂರ್ಣವಾಗಿ ತಪ್ಪು’ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಪಕ್ಷಗಳು ಕೂಡ ಅವರ ಹೇಳಿಕೆ ವಿರೋಧಿಸಿದ್ದಾರೆ.