ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿದ್ಧ ರಾಜ್ಯದ 7 ಲಕ್ಷಕ್ಕೂ ಅಧಿಕ ರೈತರನ್ನು ಅನರ್ಹಗೊಳಿಸಲಾಗಿದೆ.
ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 53.81 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು. ಇವರ ಪೈಕಿ 7 ಲಕ್ಷಕ್ಕೂ ಅಧಿಕ ರೈತರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಅನರ್ಹಗೊಳಿಸಲಾಗಿದೆ.
ಭೂ ದಾಖಲೆಗಳ ಕೊರತೆ, ಇ-ಕೆವೈಸಿ ಸಮಸ್ಯೆ, ತೆರಿಗೆ ಪಾವತಿದಾರರು, ಸರ್ಕಾರಿ ನೌಕರಿ ಹೊಂದಿರುವುದು, ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಕಾರಣಗಳಿಂದ ಹಂತ ಹಂತವಾಗಿ ಪರಿಶೀಲನೆ ನಡೆಸಿ ಸುಮಾರು 7 ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ.
2018ರಲ್ಲಿ ಯೋಜನೆ ಆರಂಭವಾದ ಸಂದರ್ಭದಲ್ಲಿ 19,819 ರೈತರು ನೋಂದಾಯಿಸಿದ್ದು, 2019-20 ರಲ್ಲಿ 53,81,184 ರೈತರು ನೋಂದಾಯಿಸಿದ್ದರು. ಅರ್ಹರಲ್ಲದವರು ಕೂಡ ಹೆಸರು ನೋಂದಾಯಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರಿಂದ ಪರಿಶೀಲನೆ ಕಾರ್ಯ ಆರಂಭಿಸಲಾಗಿದ್ದು, ಈಗ 47.50 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ರೈತರ ನೋಂದಣಿ ಕಾರ್ಯ ನಿರಂತರವಾಗಿ ನಡೆಯುವುದರಿಂದ ಪ್ರತಿ ಕಂತು ವಿತರಣೆಯ ಸಂದರ್ಭದಲ್ಲಿ ರೈತರ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತದೆ. ಅರ್ಹರನ್ನು ಸೇರಿಸುವುದು, ಅನರ್ಹರನ್ನು ಕೈಬಿಡುವ ಪ್ರಕ್ರಿಯೆ ನಿರಂತರವಾಗಿರುತ್ತದೆ.
ಆಧಾರ್ ಮತ್ತು ಪಹಣಿಯೊಂದಿಗೆ ಫ್ರೂಟ್ಸ್ ಐಡಿ ತಂತ್ರಾಂಶದಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಇ-ಕೆವೈಸಿಯೊಂದಿಗೆ ಕಿಸಾನ್ ಸಮ್ಮಾಣ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಜಮೀನಿನ ಮಾಲೀಕರು ನಿಧನರಾಗಿದ್ದಲ್ಲಿ ಇತರೆ ವಾರಸುದಾರರು ಪೌತಿ ಖಾತೆ ಮಾಡಿಸಿದರೆ ಯೋಜನೆಗೆ ಅರ್ಹರಾಗುತ್ತಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ನಂತರ ಜಮೀನು ಖರೀದಿಸಿದವರು ಮತ್ತು ತಂದೆಯ ಜಮೀನನ್ನು ಭಾಗ ಮಾಡಿಕೊಂಡಿದ್ದರೆ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ತಾಂತ್ರಿಕ ದೋಷ, ಇ-ಕೆವೈಸಿ ಸಮಸ್ಯೆಯಿಂದ ಯಾವುದೇ ರೈತರ ಹೆಸರು ಪಟ್ಟಿಯಿಂದ ಹೊರಗುಳಿದಿದ್ದರೆ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ. ಈ ಯೋಜನೆಯಡಿ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ 2 ಸಾವಿರ ರೂ. ವರ್ಗಾಯಿಸಲಾಗುವುದು.