ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಮಹತ್ವದ ಮತ್ತು ಐತಿಹಾಸಿಕ ನ್ಯಾಯ ದೊರಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇಚ್ಛಾಶಕ್ತಿಯ ಕೊರತೆಯಿಂದಾಗಿ ದಶಕಗಳ ಕಾಲದಿಂದ ಜೇಷ್ಠತಾ ಪಟ್ಟಿಯ ಪ್ರಕರಣವು ಕಗ್ಗಂಟಾಗಿ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. ನಮ್ಮ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮತ್ತು ವಿಶೇಷ ಆಸಕ್ತಿಯಿಂದ ಈ ಪ್ರಕರಣವನ್ನು ಸಕಾರಾತ್ಮಕವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ಇಲಾಖೆಯಲ್ಲಿನ ಪಿಡಿಒ ಜೇಷ್ಠತಾ ಪಟ್ಟಿಯ ಪ್ರಕರಣವು ಸವಾಲಿನಂತೆ ಎದುರಿಗಿತ್ತು. ಇದನ್ನು ಬಗೆಹರಿಸಲೇಬೇಕು ಎಂಬ ಕಾಳಜಿಯಿಂದ ಸುಮಾರು 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ನಿರಂತರವಾಗಿ ಪ್ರಕರಣದ ಮೇಲ್ವಿಚಾರಣೆ ನಡೆಸಲಾಗಿತ್ತು. ಕಾಲಮಿತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶಿಸಲಾಗಿತ್ತು. ಅಂತೆಯೇ, ನ್ಯಾಯಾಲಯದ ತೀರ್ಪು ಸುಮಾರು 2,000 ಪಿಡಿಒಗಳಿಗೆ ನ್ಯಾಯ ಒದಗಿಸಿದೆ ಹಾಗೂ ಇಲಾಖೆಯ ಆಡಳಿತಾತ್ಮಕ ವಿಷಯಗಳಿಗೆ ಪೂರಕವಾಗಿದೆ.
ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬ ನಮ್ಮ ಸಂಕಲ್ಪಕ್ಕೆ ಯಶಸ್ಸು ದೊರಕಿದೆ. ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪದೋನ್ನತಿಯು ಸರಾಗವಾಗಿದೆ, ಅಲ್ಲದೆ ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್ಗಳ ಪದೋನ್ನತಿಗೂ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
