ಬೆಂಗಳೂರು: ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಲೋಕಾಯುಕ್ತರು ಕೈಗೊಂಡಿದ್ದ ತನಿಖೆ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬೈರಶೆಟ್ಟಿಹಳ್ಳಿಯ ಶ್ರೀ ಬಾಲಾಂಜನೇಯ ಪ್ರೌಢಶಾಲೆಯ ಗ್ರಂಥಪಾಲಕ ಮತ್ತು ಗುಮಾಸ್ತ ಬಿ. ಲಕ್ಷ್ಮೀನಾರಾಯಣ ಸಲ್ಲಿಸಿದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ವಿಭಾಗೀಯಪೀಠ ವಜಾಗೊಳಿಸಿದೆ.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಹಲವು ಸಂದರ್ಭಗಳಲ್ಲಿ ಸರ್ಕಾರದಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಕೆಲವು ಉದ್ದೇಶಗಳಿಗಾಗಿ ಸರ್ಕಾರದ ಸಿಬ್ಬಂದಿಯ ಭಾಗವೆಂದೇ ಪರಿಗಣಿಸಲಾಗುವುದೆಂದು ಹೈಕೋರ್ಟ್ ತೀರ್ಪು ನೀಡಿದೆ. ಅವರ ವೇತನ, ಭತ್ಯೆ ಸೇವಾ ಷರತ್ತುಗಳನ್ನು ಸರ್ಕಾರ ನಿಯಂತ್ರಿಸುತ್ತದೆ. ಹೀಗಾಗಿ ಅರ್ಜಿದಾರರ ವಿರುದ್ಧವೂ ತನಿಖೆ ಲೋಕಾಯುಕ್ತ ತನಿಖೆ ನಡೆಸಬಹುದು ಎಂದು ಆದೇಶಿಸಲಾಗಿದೆ.
ಲೋಕಾಯುಕ್ತ ನಿಯಮದಡಿ ವರದಿ ಮತ್ತು ಸಿಸಿಎ ನಿಯಮ 14 ಎ ಅಡಿ ಸರ್ಕಾರ ತನಿಖೆ ನಡೆಸಲು ಹೊರಡಿಸಿರುವ ಆದೇಶ ಸರಿ ಇದೆ ಎಂದು ಹೈಕೋರ್ಟ್ ಹೇಳಿದೆ. ಲೋಕಾಯುಕ್ತರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 12(3) ಪ್ರಕಾರ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಮೇಲ್ನೋಟಕ್ಕೆ ಅರ್ಜಿದಾರರು ಆಸ್ತಿ ವಿವರ ಸಲ್ಲಿಸದಿರುವುದು ದೃಢಪಟ್ಟಿದೆ. ಜೊತೆಗೆ ನಿಯಮದ ಪ್ರಕಾರ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಅರ್ಜಿದಾರರು ಭೂಮಿ ಖರೀದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ಮುಂದುವರಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಆದೇಶಿಸಿದೆ.