ನವದೆಹಲಿ: ಮತದಾರರ ಹೆಸರು ಸೇರ್ಪಡೆ ಮತ್ತು ರದ್ಧತಿಗೆ ಆಧಾರ್ ದೃಢೀಕೃತ ಮೊಬೈಲ್ ಸಂಖ್ಯೆ ಮೂಲಕ ಇ- ದೃಢೀಕರಣ ವ್ಯವಸ್ಥೆಯನ್ನು ಕೇಂದ್ರ ಚುನಾವಣಾ ಆಯೋಗ ಕಡ್ಡಾಯ ಮಾಡಿದೆ.
ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಮತದಾರರ ಹೆಸರನ್ನು ಅಕ್ರಮವಾಗಿ ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಇದರ ನಡುವೆಯೇ ಸಮಸ್ಯೆ ಪರಿಹಾರಕ್ಕೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆಸಲು ಇ- ಪರಿಶೀಲನೆ, ಇ- ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮತದಾರರು ನೀಡುವುದು ಕಡ್ಡಾಯವಾಗಿದೆ. ಆನ್ಲೈನ್ ನಲ್ಲಿ ಫಾರ್ಮ್ 7 ಬಳಸಿ ಹೆಸರು ತೆಗೆಸಲಾಗುತ್ತದೆ. ಇದರಲ್ಲಿ ವ್ಯಕ್ತಿಯೊಬ್ಬರ ಹೆಸರು ಅಥವಾ ದೂರವಾಣಿ ಸಂಖ್ಯೆಯನ್ನು ಇನ್ಯಾರೋ ನಮೂದಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಇದನ್ನು ತಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆಗೆ ಇನ್ನು ಮುಂದೆ ಒಟಿಪಿ ಕಳಿಸಲಾಗುವುದು. ಅದನ್ನು ಹಾಕಿದ ಬಳಿಕ ಪ್ರಕ್ರಿಯೆ ಮುಂದುವರಿಸಲಾಗುವುದು. ಕಳೆದ ವಾರವೇ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.