ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಗೆ ಅಗತ್ಯವಿರುವ ಗಂಧದ ಎಣ್ಣೆಯನ್ನು ಸಂರಕ್ಷಿಸುವಲ್ಲಿ ವನರಕ್ಷಕರ ಪಾತ್ರ ಮಹತ್ತರವಾಗಿದೆ.
ಈ ಕಾಳಜಿಯಿಂದಲೇ, KSDL ಸಂಸ್ಥೆ ತನ್ನ 2024-25ನೇ ಸಾಲಿನ 2 ಕೋಟಿ ರೂ. CSR ನಿಧಿಯಿಂದ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು, ವೀಕ್ಷಕರು, ಮಾವುತರು, ಚಾಲಕರು ಮತ್ತು ಕಾವಾಡಿಗಳಿಗೆ ಜರ್ಕಿನ್, ಶೂ, ಬ್ಯಾಗ್, ನೀರಿನ ಬಾಟಲ್ ಒಳಗೊಂಡ ಕಿಟ್ ವಿತರಣೆ ಮಾಡುತ್ತಿದೆ.
ಈ ಯೋಜನೆಯ ಮೊದಲ ಹಂತ ಜೂನ್ 4ರಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆಯಲಿದ್ದು, ಚಾಮರಾಜನಗರ ಮತ್ತು ಮೈಸೂರಿನ 2,168 ಸಿಬ್ಬಂದಿಗೆ ಕಿಟ್ ವಿತರಣೆ ಮಾಡಲಾಗುವುದು.
ಅರಣ್ಯ ಸಚಿವ ಈಶ್ವರ್ ಖಂಡ್ರೆ, KSDL ಅಧ್ಯಕ್ಷ ಸಿ.ಎಸ್. ನಾಡಗೌಡ, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವನ್ಯಜೀವಿ ಮಂಡಳಿ ಸದಸ್ಯರು ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್(SPPA) ಸಂಸ್ಥಾಪಕ ಧ್ರುವ ಪಾಟೀಲ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದು, ಪ್ರತಿಕೂಲ ಸಂದರ್ಭಗಳಲ್ಲಿ ವನರಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ ಈ ಯೋಜನೆ ರೂಪಿಸಲು ನೆರವಾಗಿದ್ದಾರೆ. ಮುಂದಿನ ಹಂತಗಳಲ್ಲಿ ಉಳಿದ ಜಿಲ್ಲೆಗಳ ಸಿಬ್ಬಂದಿಗೂ ಈ ಕಿಟ್ ವಿತರಣೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.