ಹಾಸನ: ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಾಸಕ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಹತ್ತು ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿಕೊಟ್ಟಿದ್ದಾರೆ. ಬೆಂಬಲಿಗರು ಅದ್ದೂರಿಯಾಗಿ ಭವಾನಿ ರೇವಣ್ಣಗೆ ಸ್ವಾಗತ ಕೋರಿದ್ದಾರೆ.
ಹಾಸನಕ್ಕೆ ತೆರಳಲು ಕೋರ್ಟ್ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಹತ್ತು ತಿಂಗಳಿಂದ ಹಾಸನಕ್ಕೆ ಭವಾನಿ ರೇವಣ್ಣ ಭೇಟಿ ಕೊಟ್ಟಿರಲಿಲ್ಲ. ಇದೀಗ ಕೋರ್ಟ್ ನಿರ್ಬಂಧ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಭವಾಅನಿ ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸಿಪುರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಭವಾನಿ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಹೂಮಳೆಗರೆದು, ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ.
ಈ ವೇಳೆ ಮಾತನಡಿದ ಭವಾನಿ ರೇವಣ್ಣ, ನಾನು ಹಾಸನಕ್ಕೆ ಬರುವ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೂ ಜನರೇ ಮಾಹಿತಿ ಪಡೆದುಕೊಂಡು ನನ್ನನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಹಾಸನದ ಜನತೆಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಆರೋಪ ಕೇಳಿಬಂದ ಬಳಿಕ ಈವರೆಗೂ ನಾನು ಯಾರೊಂದಿಗೂ ಮಾತನಾಡಿರಲಿಲ್ಲ. ತುಂಬಾ ಕರೆಗಳು ಬರುತ್ತಿತ್ತು. ಆದರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ನನಗೆ ಮುಜುಗರವಾಗುತ್ತಿತ್ತು. ಇಂದು ಹೊಳೆನರಸಿಪುರಕ್ಕೆ ಬರುತ್ತಿದ್ದಂತೆ ಕ್ಷೇತ್ರದ ಜನರು ಸ್ವಾಗತಿಸಿದ ರೀತಿ ಕಂಡು ನನಗೆ ಅಚ್ಚರಿಯಾಯಿತು. ಜನರ ಪ್ರೀತಿ, ಬೆಂಬಲಕ್ಕೆ ಋಣಿಯಾಗಿರುತ್ತೇನೆ. ನನ್ನ ಕೈಲಾದ ಸಹಾಯವನ್ನು ಜನರಿಗೆ ಮಾಡುತ್ತೇನೆ ಎಂದು ಹೇಳಿದರು.