ಬೆಂಗಳೂರು: ಬೆಂಗಳೂರಿನಲ್ಲಿ ಒಂಟಿ ಮಹಿಳೆಯನ್ನು ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುರಂದರ್ (42) ಹಾಗೂ ಶಿವಪ್ಪ (35) ಬಂಧಿತ ಆರೋಪಿಗಳು. ಕಾಟನ್ ಪೇಟೆ ಪೊಲಿಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಎರಡು ದಿನಗಳ ಹಿಂದೆ ಲತಾ ಎಂಬ ಮಹಿಳೆ ಹತ್ಯೆಯಾಗಿತ್ತು. ಬಂಧಿತ ಪುರಂದರ್ ಮಹಿಳೆಯ ಸಂಬಂಧಿಕ. ಬೀದರ್ ನ ಕೆಮಿಕಲ್ ಫಾರ್ಮಸ್ಯೂಟಿಕಲ್ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರೂ. ಕುಡಿತದ ಚಟ, ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲದ್ದಕ್ಕೆ ರೈಸ್ ಪುಲ್ಲಿಂಗ್ ದಂಧೆಯಲ್ಲೂ ಭಾಗಿಯಾಗಿದ್ದರು.
ಬೀದರ್ ನಿಂದ ಪುರಂದರ್ ಹಾಗೂ ಶಿವಪ್ಪ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಸಂಬಂಧಿ, ಮೃತ ಮಹಿಳೆ ಲತಾ ಅವರ ಮನೆಗೆ ಬಂದಿದ್ದವರು ಕೊಲೆ ಸಂಚು ರೂಪಿಸಿದ್ದಾರೆ. ಹೀಗೆ ಪ್ಲಾನ್ ಮಾಡಿದವರೇ ಲತಾ ಹತ್ಯೆಗೆ ಯತ್ನಿಸಿದ್ದಾರೆ. ಆದರೆ ಧೈರ್ಯ ಸಾಲದೇ ಮನೆಯಿಂದ ಹೋದವರು, ಮಾವಿನ ಹಣ್ಣು ಕೊಡುವ ನೆಪದಲ್ಲಿ ಮತ್ತೆ ಮನೆಗೆ ಬಂದಿದ್ದಾರೆ. ಹೀಗೆ ಬಂದವರು ಲತಾ ಅವರ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ಲತಾ ಪತಿ ಪ್ರಕಾಶ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಸದ್ಯ ಆರೋಪಿಗಳಿಬ್ಬರನ್ನೂ ಬೀದರ್ ನಲ್ಲಿ ಬಂಧಿಸಲಾಗಿದೆ.