ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಖ್ಯಾತಿಯ ರಾಜ್ಯ ರಾಜಧಾನಿ ಬೆಂಗಳೂರು ವಾಟರ್ ಬೆಂಗಳೂರು ಆಗಿದೆ. ವರುಣಾರ್ಭಟಕ್ಕೆ ಬೆಂಗಳೂರು ಅಲ್ಲೋಲಕಲ್ಲೋಲವಾಗಿದೆ. ಮಳೆ ಅಬ್ಬರಕ್ಕೆ ಹೆಣ್ಣೂರು ಬಳಿಯ ಅನಾಥಾಶ್ರಮದಲ್ಲಿ ಸೃಷ್ಟಿಯಾಗಿರುವ ಅವಾಂತರ ಎಂತವರ ಮನಕಲಕುವಂತಿದೆ.
ಹೆಣ್ಣೂರು ಬಳಿಯ ಅನಾಥಶ್ರಮವೊಂದರಲ್ಲಿ ತಡರಾತ್ರಿ 2ಗಂಟೆ ಸುಮಾರಿಗೆ ಭಾರಿ ಮಳೆಯಿಂದ ಮಳೆ ನೀರು ನುಗ್ಗಿದೆ. ಅನಾಥಾಶ್ರಮದಲ್ಲಿದ್ದ ವೃದ್ಧರು, ಅಂಗವಿಕಲರು, ಅನಾರೋಗ್ಯಪೀಡಿತರು ಮಂಡಿವರೆಗಿನ ನೀರಿನಲ್ಲಿಯೇ ಇಂದು ಮಧ್ಯಾಹ್ನದವರೆಗೂ ಕಾಲಕಳೆದಿದ್ದಾರೆ.
ಅನಾಥಾಶ್ರಮದ ಮುಂದಿನ ರಸ್ತೆ, ಅಕ್ಕಪಕ್ಕದ ನಿವಾಸ, ಅನಾಥಾಶ್ರಮದ ಒಳಗೆ ನೀರು ನುಗ್ಗಿದೆ. ಅನಾಥಾಶ್ರದ ಒಳಭಾಗದಲ್ಲಿ ಮಂಡಿವರೆಗೆ ನೀರು ನಿಂತಿದ್ದು, ಅಲ್ಲಿದ್ದ ಅಂಗವಿಕಲರು ಮಂಡಿವರೆಗಿನ ನೀರಿನಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತಲ್ಲೇ ಕುಳಿತಿದ್ದಾರೆ. ವೃದ್ಧರು ಅನಾಥಾಶ್ರಮ ಕಟ್ಟೆಯ ಮೇಲೆ, ಕುರ್ಚಿಗಳ ಮೇಲೆ ಕುಳಿತು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಮತ್ತೊಂದೆಡೆ ಅನಾಥಶ್ರಮದ ರೂಮಿನೊಳಗೆ ಜಲಾವೃತಗೊಂಡಿರುವ ಕಾಟ್ ಮೇಲೆ ಆನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೊಬ್ಬರು ಮಲಗಿರುವ ದೃಶ್ಯ ಕರಳು ಹಿಂಡುವಂತಿದೆ.
ಮಧ್ಯರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಅನಾಥಾಶ್ರಮಕ್ಕೆ ನೀರು ನುಗ್ಗಿದೆ. ಎಲ್ಲರನ್ನೂ ಸ್ಥಳಾಂತರ ಮಾಡಲೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿಕೊಂಡಿದ್ದೇವೆ. ಊಟ-ತಿಂಡಿ, ನೀರೂ ಇಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅನಾಥಾಶ್ರಮದ ಮ್ಯಾನೇಜರ್ ತಿಳಿಸಿದ್ದಾರೆ. ಸದ್ಯ ಅನಾಥಾಶ್ರಮದತ್ತ ಅಧಿಕಾರಿಗಳು, ಅಗ್ನಿಶಾಮಕ, ಪಾಲಿಕೆ ಸಿಬ್ಬಂದಿ ತೆರಳಿದ್ದು, ಬೋಟ್ ಗಳ ಮೂಲಕ ಅಲ್ಲಿದ್ದವರನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ.