ಬೆಳಗಾವಿ: ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿ ಯುವಕರಗೊಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ವಾಹನಗಳಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ಆರೋಪ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ವಾಹನವನ್ನು ತದೆದು ಗೋವುಗಳನ್ನು ರಕ್ಷಿಸಿ, ಬಳಿಕ ಇಂಗಳಿ ಗ್ರಾಮದ ಬಳಿಯ ಗೋಶಾಲೆಗೆ ಸ್ಥಳಾಂತರಿಸಿದ್ದರು. ಇಂದು ಗೋಶಾಲೆಯಲ್ಲಿದ್ದ ಗೋವುಗಳನ್ನು ಅಪರಿಚಿತ ಯುವಕರ ಗುಂಪು ಬೇರೆಡೆ ಶಿಫ್ಟ್ ಮಾಡಲು ಯತ್ನಿಸುತ್ತಿದೆ ಎಂಬ ಮಾಹಿತಿ ಮೇರೆಗೆ ಶ್ರೀರಾಮಸೇನೆಯ ಕಾರ್ಯಕರ್ತರು ಸ್ಥಳಕ್ಕೆ ಬಂದು ವಿಚಾರಿಸಿದ್ದಾರೆ.
ಗೋವುಗಳನ್ನು ವಾಹನದಲ್ಲಿ ತುಂಬುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕರ ಗುಂಪು ಶ್ರೀರಾಮಸೇನೆಯ ಐವರು ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.