ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿಯೇ ನಿವೃತ್ತ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ನಡೆದಿದೆ.
ಅಳಕೆ ನಿವಾಸಿ ಗಿರಿಧರ ಯಾದವ್ (61) ಆತ್ಮಹತ್ಯೆ ಮಾಡಿಕೊಂಡವರು. ಕೊಡಿಯಾಲಬೈಲ್ ನ ಬ್ಯಾಂಕ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಗಿರಿಧರ್ ಯಾದವ್, ಇತ್ತೀಚೆಗೆ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕವೂ ಬ್ಯಾಂಕ್ ಗೆ ಬಂದು ಹೋಗುತ್ತಿದ್ದರು. ಬುಧವಾರ ಬ್ಯಾಂಕ್ ಗೆಂದು ಹೋದವರು ಮನೆಗೆ ವಾಪಸ್ ಆಗಿಲ್ಲ. ಇದರಿಂದ ಕಂಗಾಲಾದ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇಂದು ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಸ್ಟೋರ್ ರೂಂ ಬಾಗಿಲು ತೆಗೆದು ನೋಡಿದಾಗ ಶಾಕ್ ಆಗಿದ್ದಾರೆ. ಸ್ಟೋರ್ ರೂಂ ನಲ್ಲಿಯೇ ಗಿರಿಧರ ಯಾದವ್ ನೇಣಿಗೆ ಕೊರಳೊಡ್ಡಿದ್ದಾರೆ.
ಬುಧವಾರ ಬ್ಯಾಂಕ್ ಗೆ ಬಂದಿದ್ದ ಗಿರಿಧರ್, ಸ್ಟೋರ್ ರೂಂ ನತ್ತ ಹೋದವರು ಅಲ್ಲಿಯೇ ಅವಿತು ಕುಳಿತಿದ್ದು, ಇಂದು ಬೆಳಗಾಗುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.