ಬೆಂಗಳೂರು : ರಾಜಭವನ ಚಲೋ ನಡೆಸಲು ಯತ್ನಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾಲ್ತುಳಿತ ದುರಂತ ಖಂಡಿಸಿ ರಾಜಭವನ ಚಲೋ ನಡೆಸಲು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರು ಮುಂದಾಗಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇಡಿಕೆಗಳೇನು..?
ಕರ್ನಾಟಕ ಸರ್ಕಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ಸಿಎ), ಕೇಂದ್ರ ಕ್ರಿಕೆಟ್ ಅಕಾಡೆಮಿ (ಸಿಸಿಎ) ಈ ಎಲ್ಲಾ ಕ್ರಿಕೆಟ್ ಸಂಸ್ಥೆಗಳು ಸೇರಿ ಸತ್ತವರಿಗೆ ತಲಾ ಒಬ್ಬೊಬ್ಬರಿಗೆ ಐದು ಕೋಟಿ ರೂ. ಪರಿಹಾರ ಕೊಡಬೇಕೆಂದು ಒತ್ತಾಯಿಸಿ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಇಂದು ರಾಜಭವನದ ಮುಂದೆ ಚಳವಳಿ ನಡೆಸಲು ಮುಂದಾಗಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಮಾಯಕರ ಸಾವು ಈ ಸಾವಿಗೆ ಕಾರಣ ಯಾರು…? ಈ ಸಾವು ನ್ಯಾಯವೇ…? ಇದನ್ನು ನಾವು ಬಹಳ ಗಂಭೀರವಾಗಿ ರಾಜಕೀಯ ರಹಿತವಾಗಿ ಚಿಂತನೆ ಮಾಡಬೇಕಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಅವರು ಅಪರಾಧಿ ಸ್ಥಾನದಲ್ಲಿ ನಿಲ್ಲಲೇಬೇಕು.
ಬಹಳ ಮುಖ್ಯವಾಗಿ ಆರ್ಸಿಬಿ ವಿಜಯೋತ್ಸವ ಮೆರವಣಿಗೆ ಸಮಾರಂಭ ನಡೆಸಲು ತೀರ್ಮಾನಿಸಿದವರು ಯಾರು. ಇದು ಬಹಳ ಮುಖ್ಯ. ನಮ್ಮ ರಾಜ್ಯದ ಗುಪ್ತಚರ ಹಾಗು ಪೊಲೀಸ್ ಇಲಾಖೆ ವಿಫಲವಾಗಿರುವುದು ಸತ್ಯ. ಈ ಸಮಾರಂಭ ವ್ಯವಸ್ಥೆಗೆ ಯಾರ ಅನುಮತಿ, ಯಾರ ಚಿಂತನೆ, ಯಾರಿಗಾಗಿ ಈ ಸಮಾರಂಭ. ಈ ಸಮಾರಂಭದಲ್ಲಿ 11 ಜನ ಸಾವಿಗೆ ಯಾರು ಕಾರಣ…? ಇದು ಬಹು ಬೇಗ ತೀರ್ಮಾನವಾಗಬೇಕು. ಪೊಲೀಸ್ ಅಧಿಕಾರಿಗಳ ಅಮಾನತು ಸರಿಯಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದರು.
ರಾಜ ಭವನದ ಮುಂದೆ ಚಳುವಳಿ pic.twitter.com/nUp3iAUtzz
— ಶ್ರೀ ವಾಟಾಳ್ ನಾಗರಾಜ್ (@VatalNagaraj) June 9, 2025