ರಾಜ್ಯದ ಈ ಮಠ ಮೇಳದಲ್ಲಿ ರಥ ಎಳೆಯುವುದು ಮಹಿಳೆಯರು ಮಾತ್ರ..!

At This Karnataka Mutt Fair, Only Women Have Pulled 165 Kg Chariot Since  2005 - News18ದೇಶದ ಯಾವುದೇ ಭಾಗದಲ್ಲಿ ನಡೆಯುವ ದೇವಾಲಯಗಳ ಜಾತ್ರೆಗಳಲ್ಲಿ ಹಿಂದೆಲ್ಲಾ ಪುರುಷರು ಮಾತ್ರ ರಥವನ್ನು ಎಳೆಯುತ್ತಿದ್ದರು. ಇಂದಿಗೂ ಅನೇಕ ಧಾರ್ಮಿಕ ಸಂಸ್ಥೆಗಳು ಪಿತೃಪ್ರಭುತ್ವದ ನಿಯಮಗಳಿಗೆ ಅಂಟಿಕೊಂಡಿವೆ. ಆದರೆ, ಈಗಿನ ಪೀಳಿಗೆಯು ಲಿಂಗ ಸಮಾನತೆಯ ಬಗ್ಗೆ ಧ್ವನಿ ಎತ್ತುತ್ತಿದೆ. ಇದೀಗ ಮಹಿಳೆಯರೂ ಕೂಡ ರಥ ಎಳೆಯುವ ಮೂಲಕ ಪುರುಷರಿಗೆ ತೀವ್ರ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಗದಗ ಜಿಲ್ಲೆಯ ಗಜೇಂದ್ರಗಢದಲ್ಲಿರುವ ಹಾಲಕೆರೆ ಅನ್ನದಾನೇಶ್ವರ ಮಠದ ವಾರ್ಷಿಕ ಜಾತ್ರೆಯಲ್ಲಿ ಮಹಿಳಾ ಭಕ್ತರು ರಥವನ್ನು ಎಳೆಯುವ ಮೂಲಕ ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಕಳೆದ 18 ವರ್ಷಗಳಿಂದ ಇಲ್ಲಿ ಮಹಿಳಾ ಭಕ್ತರು ಮಾತ್ರ ರಥವನ್ನು ಎಳೆದಿದ್ದಾರೆ. ಇಲ್ಲಿ ಮಹಿಳೆಯರು 165 ಕಿಲೋಗ್ರಾಂಗಳಷ್ಟು ಭಾರವಿರುವ ರಥವನ್ನು ಎಳೆಯುತ್ತಾರೆ.

2005ರಲ್ಲಿ 165 ಕೆಜಿ ತೂಕದ ರಥ ಎಳೆಯುವ ಮಹಿಳಾ ಭಕ್ತರ ಈ ಅನುಕರಣೀಯ ಸಾಧನೆ ಆರಂಭವಾಯಿತು. ಅಂದು ಹಾಲಕೆರೆ ಅನ್ನದಾನೇಶ್ವರ ಮಠದ ವಾರ್ಷಿಕ ಜಾತ್ರೆಯನ್ನು ಆಯೋಜಿಸಿದ್ದ ಶ್ರೀಗಳು ಶಾಲಾ ವಿದ್ಯಾರ್ಥಿನಿಯರು ಹಾಗೂ ರೈತ ಮಹಿಳೆಯರನ್ನು ರಥ ಎಳೆಯಲು ಆಹ್ವಾನಿಸಿದ್ದರು. ರಥ ಎಳೆಯಲು ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದ್ದರು. ಮಹಿಳಾ ಬರಹಗಾರರು, ಸಾಧಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡಿದರು.

ಅಂದಿನಿಂದ ಮೇಳದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಈ ಜಾತ್ರೆಯ ಅಂಗವಾಗಿ ಮಹಿಳಾ ಕೇಂದ್ರಿತ ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣಗಳನ್ನೂ ಆಯೋಜಿಸಲಾಗಿದೆ. ಈ ವರ್ಷದ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಉದ್ಘಾಟಿಸಿದ್ರು. ಹಾಲಕೆರೆ, ಸುತ್ತಮುತ್ತಲಿನ ಗ್ರಾಮಗಳು ಮತ್ತು ರಾಜ್ಯದಾದ್ಯಂತ ಅನೇಕ ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಗದಗದ ಪಟ್ಟಣದಿಂದ 40 ಕಿ.ಮೀ ದೂರದಲ್ಲಿರುವ ಮಠವು ಪ್ರತಿ ವರ್ಷ 500ಕ್ಕೂ ಹೆಚ್ಚು ಮಹಿಳಾ ಸಾಧಕರನ್ನು ಪುರಸ್ಕರಿಸುತ್ತದೆ. ಇದರಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ವಿದ್ಯಾರ್ಥಿ ಟಾಪರ್‌ಗಳಲ್ಲಿ 10ನೇ ತರಗತಿ ಮತ್ತು ಕಾಲೇಜುಗಳಲ್ಲಿ ಅಗ್ರಸ್ಥಾನ ಪಡೆದವರಿಗೆ ಪುರಸ್ಕರಿಸಲಾಗುತ್ತದೆ. ಭಾಷಣ ಮಾಡಲು ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ರಾಜ್ಯದಾದ್ಯಂತದ ಪ್ರಮುಖ ಮಹಿಳಾ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ. ಅಲ್ಲದೆ, ಯಾವುದೇ ರಾಜಕೀಯ ಪಕ್ಷ ಭೇದವಿಲ್ಲದೆ ಮಹಿಳಾ ಸಚಿವರು ಅಥವಾ ಶಾಸಕರು ಈ ಜಾತ್ರೆಯ ನೇತೃತ್ವ ವಹಿಸುತ್ತಾರೆ.

ಈ ಜಾತ್ರೆಯಲ್ಲಿ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದರೆ, ರಥ ಎಳೆಯುವ ಜವಾಬ್ದಾರಿ ಮಾತ್ರ ಮಹಿಳಾಮಣಿಯರೇ ಪಡೆಯುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read