ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿರುವ ಘಟನೆ ರಾಜ್ಯ ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಮಾಜಿ ಗೃಹ ಸಚಿವ ಅರಗಜ್ಞಾನೇಂದ್ರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅರಗಜ್ಞಾನೇಂದ್ರ, ಈ ದುರಂತಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆ. ಇದು ಸರ್ಕಾರದ ಪ್ರಾಯೋಜಿತ ಕೊಲೆ. ಹಾಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನಾನು ಗೃಹ ಸಚಿವನಾಗಿದ್ದಾಗ ಪುನೀತ್ ರಾಜ್ ಕುಮಾರ್ ನಿಧನದ ಸಂದರ್ಭವನ್ನು ನಾವು ಹೇಗೆ ನಿಭಾಯಿಸಿದೆವು. 20 ಲಕ್ಷ ಜನ ಸೇರಿದ್ದರು. ಅವರನ್ನು ಹೇಗೆ ನಾವು ನಿಭಾಸಿದ್ದೇವೆ. ಇವರಿಂದ ಚಿನ್ನಸ್ವಾಮಿ ಘಟನೆ ನಿಭಾಯಿಸಲು ಸಾಧ್ಯವಾಗಿಲ್ಲ. ಪೊಲೀಸರು ಬೇಡ ಅಂದರೂ ಇವರು ಕಾರ್ಯಕ್ರಮ ಮಾಡಿದ್ದಾರೆ. ನಿಮ್ಮ ಮಕ್ಕಳು, ಮೊಮ್ಮಕ್ಕಳ ಫೋಟೋ ಸೇಷನ್ ಗಾಗಿ ಈ ಕಾರ್ಯಕ್ರಮ ಮಾಡಿ ದುರಂತಕ್ಕೆ ಕಾರಣರಾದ್ರಾ? ಎಂದು ಕಿಡಿಕಾರಿದರು.
ಬೆಂಗಳೂರಿನ ಕಾಲ್ತುಳಿತ ದುರಂತಕ್ಕೂ ಕುಂಭಮೇಳದಲ್ಲಿ ಪ್ರಯಾಗ್ ರಾಜ್ ನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೂ ಹೋಲಿಕೆ ಸರಿಯಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಈ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರು ಬೆಲೆ ತೆರಬೇಕು ಎಂದರು.
ವಿಪಕ್ಷವಾಗಿ ನಾವು ಮಾತನಾಡಿದರೆ ಅದನ್ನು ರಾಜಕೀಯ ಎನ್ನುತ್ತಾರೆ. ಇವರು ಮಾಡಿದ್ದೆಲ್ಲವನ್ನೂ ಸರಿ ಅಂತಾ ನಾವು ಸುಮ್ಮನೆ ಬಿಡಬೇಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.