ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದಕ್ಕೆ ಮಾಲೀಕನನ್ನೇ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಹಲಸೂರು ಠಾಣೆ ಪೋಲೀಸರು ಬಂಧಿಸಿದ್ದಾರೆ.
ಕುದುರೆ ತರಬೇತುದಾರ ಜಸ್ ಬೀರ್ ಸಿಂಗ್, ಈತನ ಸಹೋದರ ಸನ್ನಿ ಹಾಗೂ ಸಹಾಯಕ ಬಿಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮುಂಬೈ ಮೂಲದ ಉದ್ಯಮಿ ಸುಚಿತ್ ಜಯರಾಜ್ ಶಾ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು.
ಸುಚಿತ್ ಜಯರಾಜ್ ಗೆ ಕುದುರೆ ರೇಸ್ ಹವ್ಯಾಸವಿತ್ತು. ಹೀಗಾಗಿ ಅವರು ರೇಸ್ ಕುದುರೆ ಖರೀದಿಸಿದ್ದರು. ಈ ಕುದುರೆಗೆ ತರಬೇತುದಾರರಾಗಿ ಜಸ್ ಬೀರ್ ಸಿಂಗ್ ನನ್ನು ನೇಮಕ ಮಾಡಿಕೊಂಡಿದ್ದರು. ಅವರು ತರಬೇತಿ ನೀಡಿದ್ದ ಕುದುರೆಗಳು ಅನೇಕ ರೇಸ್ ನಲ್ಲಿ ಗೆದ್ದಿದ್ದವು.
ಇದೇ ವೇಳೆ ಸುಚಿತ್ ಅವರು ಪಂಜಾಬ್ ಸ್ಟಡ್ ಫಾರ್ಮ್ ನಿಂದ ಕುದುರೆ ಖರೀದಿಸಿದ್ದು, ಈ ವ್ಯವಹಾರದಲ್ಲಿ ಜಸ್ ಬೀರ್ ಸಿಂಗ್ ಸುಮಾರು 1.5 ಲಕ್ಷ ರೂ. ಹಣವನ್ನು ಸುಚಿತ್ ಗೆ ಕೊಡಬೇಕಿತ್ತು. ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದರಿಂದ ಜಸ್ ಬೀರ್ ನನ್ನು ಕೆಲಸದಿಂದ ತೆಗೆದಿದ್ದರು. ಕಳೆದ ವಾರ ರೇಸ್ ಇದ್ದ ಕಾರಣ ಸ್ನೇಹಿತನೊಂದಿಗೆ ಬೆಂಗಳೂರಿಗೆ ಬಂದಿದ್ದ ಸುಚಿತ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.
ಸಹೋದರ ಸನ್ನಿ, ಸಹಾಯಕ ಬಿಲ್ಲಾನನ್ನು ಕಳುಹಿಸಿ ಮಾತನಾಡಬೇಕು ಎಂದು ಪಾರ್ಕಿಂಗ್ ಜಾಗಕ್ಕೆ ಸುಚಿತ್ ಕರೆಸಿಕೊಂಡು ಹಲ್ಲೆ ಮಾಡಿ ಸ್ಕ್ರೂಡ್ರೈವರ್ ನಿಂದ ಚುಚ್ಚಲು ಯತ್ನಿಸಿದ್ದಾರೆ. ಈ ವೇಳೆ ಸುಚಿತ್ ತಪ್ಪಿಸಿಕೊಂಡಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದರು. ಸುಚಿತ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.