
ವಿಜಯಪುರ: ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಮೂಲದಿಂದಲೇ ಅಪಾರ ಪ್ರಮಾಣದ ಹಣ ಹೋಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ ಸೋಲಿಸಲು ಹಣ ಹೋದ ವಿಚಾರದ ಬಗ್ಗೆ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸೋತವರು, ಗೆದ್ದ ಅಭ್ಯರ್ಥಿಗಳ ದೂರು ಕೂಡ ಇದೆ ಆಗಿದೆ. ತುಮಕೂರು ಕ್ಷೇತ್ರದಿಂದ ಜಯಗಳಿಸಿದ ಸೋಮಣ್ಣ ಅವರು ದೂರು ಕೂಡ ಇದೆ. ಕಲಬುರಗಿ ಅಭ್ಯರ್ಥಿ ಉಮೇಶ್ ಜಾಧವ್, ಬೀದರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಗವಂತ ಖೂಬಾ, ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಅಣ್ಣ ಸಾಹೇಬ್ ಜೊಲ್ಲೆ ಅವರ ದೂರು ಕೂಡ ಇದೆ. ದೊಡ್ಡ ದೊಡ್ಡ ಜವಾಬ್ದಾರಿ ಇರುವವರು ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ಲೋಕಸಭಾ ಸದಸ್ಯರು ಕೂಡ ಜನಪ್ರಿಯತೆ ಕಳೆದುಕೊಂಡಿದ್ದರು. ಜನರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಕೆಲಸ ಮಾಡಿರಲಿಲ್ಲ. ಕಾರ್ಯಕರ್ತರು, ಶಾಸಕರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಹೀಗಾಗಿ ಸೋಲಿಗೆ ಇವು ಕೂಡ ಕಾರಣವಾಗಿದೆ ಎಂದು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಹರಿಹರ ಶಾಸಕರು ಹೇಳುತ್ತಾರೆಂದರೆ ಅದು ಗಂಭೀರ ಆರೋಪ. ಶಾಸಕರಂತಹ ದೊಡ್ಡ ಜವಾಬ್ದಾರಿ ಇರುವವರು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಮಾತನಾಡಿರುವುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ವಿಜಯಪುರ ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ, ನಮ್ಮ ನಡುವೆ ಜಗಳವಿತ್ತು. ಚುನಾವಣೆಯಲ್ಲಿ ನಾವು ಒಂದಾಗಿ ಕೆಲಸ ಮಾಡಿದ್ದೇವೆ. ಪಕ್ಷ ಮತ್ತು ದೇಶದ ವಿಚಾರ ಬಂದಾಗ ಒಂದಾಗಬೇಕು. ಒಂದು ಲೋಕಸಭಾ ಸ್ಥಾನ ಕಳೆದುಕೊಂಡರೆ ಮೋದಿಯವರನ್ನು ಕಳೆದುಕೊಂಡಂತಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.