ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಸೆಖೆಯ ಹೊಡೆತಕ್ಕೆ ಈಗಾಗ್ಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಓಡಿಶಾ, ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಹೀಟ್ ಸ್ಟ್ರೆಸ್ ಮತ್ತು ವಿಪರೀತ ಬಿಸಿಲಿನಿಂದಾಗಿ 85ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಹಲವು ಪ್ರದೇಶಗಳಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗಿದ್ದು, ದಾಖಲೆ ಮಟ್ಟ ಮುಟ್ಟಿದೆ.
ಹೀಟ್ ಸ್ಟ್ರೆಸ್ ಎಂದರೇನು?
ಹೆಚ್ಚಿನ ಶಾಖದಿಂದಾಗಿ ದೇಹದ ಆಂತರಿಕ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯವು ಹದಗೆಟ್ಟಾಗ ಹೀಟ್ ಸ್ಟ್ರೆಸ್ ಸಂಭವಿಸುತ್ತದೆ. ಅತಿಯಾದ ಶಾಖದಿಂದಾಗಿ ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಬೆವರುವ ಮೂಲಕ ದೇಹವನ್ನು ತಂಪಾಗಿಸುವುದು ನೈಸರ್ಗಿಕ ವಿಧಾನ. ಆದರೆ ದೇಹವು ತುಂಬಾ ಬಿಸಿಯಾದಾಗ ಮತ್ತು ಬೆವರು ಬೇಗನೆ ಒಣಗಿಹೋಗುತ್ತದೆ. ನಿರ್ಜಲೀಕರಣದಿಂದ ಕೂಡ ದೇಹದ ಉಷ್ಣತೆಯು ಅಪಾಯಕಾರಿ ಮಟ್ಟಕ್ಕೆ ಏರಬಹುದು. ಹೀಟ್ ವೇವ್, ವಿಕಿರಣ ಶಾಖ, ಹೆಚ್ಚಿನ ಆರ್ದ್ರತೆ, ಬಿಸಿ ವಸ್ತುಗಳೊಂದಿಗಿನ ನೇರ ಸಂಪರ್ಕ ಮತ್ತು ಅತಿಯಾದ ದೈಹಿಕ ಚಟುವಟಿಕೆಯಿಂದ ಕೂಡ ಹೀಟ್ ಸ್ಟ್ರೆಸ್ ಸಂಭವಿಸುತ್ತದೆ.
ಹೀಟ್ ಸ್ಟ್ರೆಸ್ ಲಕ್ಷಣಗಳು
– ತೀವ್ರ ಬಾಯಾರಿಕೆ ಮತ್ತು ತಲೆತಿರುಗುವಿಕೆ
– ಅತಿಯಾದ ಬೆವರುವಿಕೆ ಅಥವಾ ಬೆವರದೇ ಇರುವುದು
– ತೀವ್ರ ತಲೆನೋವು
– ಸ್ನಾಯು ಸೆಳೆತ ಅಥವಾ ದೌರ್ಬಲ್ಯ
– ವಾಕರಿಕೆ ಅಥವಾ ವಾಂತಿ
– ಚರ್ಮ ಕೆಂಪಾಗುವುದು ಮತ್ತು ಉಷ್ಣತೆ
– ಪ್ರಜ್ಞೆ ತಪ್ಪುವುದು
ಹೀಟ್ ಸ್ಟ್ರೆಸ್ಗೆ ಪರಿಹಾರ…
ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಮನೆಯೊಳಗೇ ಇರಿ. ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ನೆರಳಿನ ಪ್ರದೇಶಗಳನ್ನು ಬಳಸಿ. ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರಗಳನ್ನು ಸೇವಿಸಿ. ದಿನವಿಡೀ ನೀರು, ಮಜ್ಜಿಗೆ, ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಬೇಕು.
ಹಗುರವಾದ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ. ಹತ್ತಿಯ ಬಟ್ಟೆಗಳು ಉತ್ತಮ. ಇದು ಬೆವರನ್ನು ಹೀರಿಕೊಳ್ಳುತ್ತದೆ. ಹೊರಗೆ ಹೋಗುವಾಗ ಟೋಪಿ ಅಥವಾ ಛತ್ರಿ ಬಳಸಿ. ವಿಪರೀತ ತಾಪಮಾನವಿದ್ದಾಗ ಎಸಿ ರೂಮಿನಲ್ಲಿ ಇರಿ. ವಿಪರೀತ ವ್ಯಾಯಾಮ ಮಾಡಬೇಡಿ. ಅತಿಯಾದ ದೈಹಿಕ ಚಟುವಟಿಕೆಯನ್ನು ತಪ್ಪಿಸಿ.
ಹೀಟ್ ಸ್ಟ್ರೆಸ್ ಸಂದರ್ಭದಲ್ಲಿ ಏನು ಮಾಡಬೇಕು ?
ಹೀಟ್ ಸ್ಟ್ರೆಸ್ಗೆ ತುತ್ತಾದವರನ್ನು ತಂಪಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿ. ತಣ್ಣೀರಿನಿಂದ ಸ್ಪಾಂಜ್ ಬಾತ್ ಮಾಡಿಸಿ. ORS ಕುಡಿಸಬಹುದು. ತಣ್ಣನೆಯ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪನ್ನು ಮಿಶ್ರಣ ಮಾಡಿ ಕೂಡ ಕುಡಿಸಬಹುದು. ವ್ಯಕ್ತಿಯು ಪ್ರಜ್ಞಾಹೀನರಾಗಿದ್ದರೆ ತಕ್ಷಣವೇ ಆಂಬ್ಯುಲೆನ್ಸ್ಗೆ ಕರೆ ಮಾಡಿ.